ಶಿವಮೊಗ್ಗ: ದೇಹಕ್ಕೆ ಹಾಲು ಎಷ್ಟು ಮುಖ್ಯ? ಹಾಲು ಏಕೆ ಕುಡಿಯಬೇಕು? ಎಷ್ಟು ಪ್ರಮಾಣ ಹಾಗೂ ಯಾವ ಗುಣಮಟ್ಟದ ಹಾಲು ಕುಡಿಯಬೇಕು? ಈ ಎಲ್ಲ ವಿಷಯಗಳ ಬಗ್ಗೆ ಅರಿವು ಮೂಡಿಸಲು ಸ್ವತಃ ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟ (ಶಿಮೂಲ್) ನಿಮ್ಮ ಮನೆ ಬಾಗಿಲಿಗೆ ಬರಲಿದೆ!
`ಬನ್ನಿ ಹಾಲಿನ ಪ್ರಾಮುಖ್ಯತೆ ತಿಳಿಯೋಣ~ ಎಂಬ ಘೋಷಣೆ ಅಡಿ ಹಾಲಿನ ಬಗ್ಗೆ ಅರಿವು ಮೂಡಿಸಲು ಶಿಮೂಲ್ `ವಿಶ್ವ ಹಾಲು ದಿನಾಚರಣೆ~ ಆಚರಿಸಲು ಮುಂದಾಗಿದೆ.ಕೆಎಂಎಫ್ ಸೂಚನೆಯಂತೆ ಶಿಮೂಲ್ ಜೂನ್ 1ರಂದು `ವಿಶ್ವ ಹಾಲು ದಿನಾಚರಣೆ~ಯನ್ನು ವಿಶೇಷವಾಗಿ ಆಚರಿಸಲಿದೆ.
ಅಂದು ಬೆಳಿಗ್ಗೆ 7.30ಕ್ಕೆ ನೆಹರು ಕ್ರೀಡಾಂಗಣದಿಂದ ಹಾಲಿನ ಶ್ರೇಷ್ಠತೆ ಕುರಿತು ಜಾಗೃತಿ ಮೂಡಿಸಲು ಜಾಥಾ ಹೊರಡಲಿದೆ. ಮಹಾವೀರ ವೃತ್ತದಲ್ಲಿ ಹಾದು ಗೋಪಿವೃತ್ತದಿಂದ ಜೈಲ್ ವೃತ್ತ ತಲುಪುವ ಜಾಥಾ, ಲಕ್ಷ್ಮೀ ಚಿತ್ರಮಂದಿರ, ಉಷಾ ನರ್ಸಿಂಗ್ ಹೋಂ ಮೂಲಕ ಕ್ರೀಡಾಂಗಣಕ್ಕೆ ಸಮಾಪನಗೊಳ್ಳುವುದು.
ಹಲ್ಲು ಮತ್ತು ಮೂಳೆಗಳ ಬಲವರ್ಧನೆಗೆ, ಚೈತನ್ಯಕ್ಕೆ, ನರಗಳ ಕಾರ್ಯಕ್ಕೆ, ಬೆಳವಣಿಗೆಗೆ, ರೋಗ ನಿರೋಧಕ ಶಕ್ತಿಗೆ, ಕೆಂಪು ರಕ್ತಕಣ ಗಳನ್ನು ಹೆಚ್ಚಿಸುವಲ್ಲಿ ಶುದ್ಧ ಹಾಲು ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ, ಎಲ್ಲ ವಯಸ್ಸಿನವರ ದೇಹದ ಆರೋಗ್ಯಕ್ಕೆ ಹಾಲು ಮತ್ತು ಅದರ ಉತ್ಪನ್ನಗಳು ಸಹಕಾರಿ ಆಗಿದೆ. ಈ ಎಲ್ಲ ಅಂಶಗಳನ್ನು `ಹಾಲು ದಿನಾಚರಣೆ~ಯಲ್ಲಿ ಮನದಟ್ಟು ಮಾಡಿಕೊಡಲಾಗುವುದು.
ಜಿಲ್ಲಾ ಒಲಿಂಪಿಕ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆಯುವ ಜಾಥಾದ ಉದ್ದಕ್ಕೂ ಹಾಲಿನ ಮಹತ್ವದ ಬಗ್ಗೆ ಅಧಿಕಾರಿಗಳು, ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದು, ಶಿಮೂಲ್ ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ ಎಂದು ಶಿಮೂಲ್ನ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ಸೈನ್ಸ್ ಮೈದಾನದ ಮುಂಭಾಗದಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳಿಗೆ 200ಮಿ.ಲೀ. ಟೆಟ್ರಾ ಪ್ಯಾಕ್ನ ಹಾಲನ್ನು ಉಚಿತವಾಗಿ ವಿತರಿಸಲಾಗುವುದು. ದುರ್ಗಿಗುಡಿ ಶಾಲೆಯ ಮಕ್ಕಳಿಗೂ ಹಾಲಿನ ಪ್ಯಾಕೆಟ್ಗಳನ್ನು ನೀಡಲಾಗುವುದು ಎಂದಿದ್ದಾರೆ.
ಅದೇ ರೀತಿ, ಶೀಘ್ರದಲ್ಲೇ ಶಿಮೂಲ್ ವ್ಯಾಪ್ತಿಗೆ ಬರುವ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲೂ ಈ `ವಿಶ್ವ ಹಾಲು ದಿನಾಚರಣೆ~ ಆಚರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.