ADVERTISEMENT

ಕನ್ನಡದ ರಂಗಭೂಮಿ: ಚಿಂತನೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 6:10 IST
Last Updated 3 ಅಕ್ಟೋಬರ್ 2011, 6:10 IST

ಶಿವಮೊಗ್ಗ: ಕನ್ನಡದ ರಂಗಭೂಮಿ ಒಂದು ಕಾಲದಲ್ಲಿ ಅತ್ಯುತ್ತಮ ಸ್ಥಿತಿಯಲ್ಲಿತ್ತು. ಆದರೆ, ಇಂದು ಕನ್ನಡದ ರಂಗಭೂಮಿ ಬಗೆಗೆ ಬಹಳ ಹೆಮ್ಮೆ ಪಡುವಂತಹ ಸ್ಥಿತಿಯಲ್ಲಿ ಇಲ್ಲ. ಈ ಕುರಿತು ಸೂಕ್ತ ಚಿಂತನೆ ನಡೆಸಬೇಕಿದೆ ಎಂದು ಸಾಹಿತಿ ನಾ. ಡಿಸೋಜ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಬಾಬುಕೋಡಿ ಬಿ.ವಿ. ಕಾರಂತ ರಂಗಪ್ರತಿಷ್ಠಾನ, ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ `ಬಿ.ವಿ.ಕಾರಂತ ರಂಗನಮನ~ ಮೂರು ದಿನಗಳ ನಾಟಕೋತ್ಸವದ ಸಮಾರೋಪದಲ್ಲಿ ಭಾನುವಾರ ಅವರು ಮಾತನಾಡಿದರು.

ನೀನಾಸಂ, ರಂಗಾಯಣ, ಸಾಣೆಹಳ್ಳಿ, ಕುಂದಾಪುರದ ಕಾಲೇಜು ಸೇರಿದಂತೆ ಹಲವು ಕಡೆಗಳಲ್ಲಿ ರಂಗತರಬೇತಿ ನೀಡಲಾಗುತ್ತಿದೆ. ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ಹೊರಬರುತ್ತಿದ್ದಾರೆ. ಇವರೆಲ್ಲ ರಂಗದ ಮೇಲೆಯೇ ಬರುತ್ತಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಇಲ್ಲಿಂದ ಹೊರಬರುತ್ತಿರುವ ಬಹುತೇಕ ಮಂದಿ ಟಿವಿ ಧಾರಾವಾಹಿ, ಸಿನಿಮಾ ಮಾಧ್ಯಮವನ್ನು ಅರಸಿ ಹೋಗುತ್ತಿದ್ದಾರೆ. ಹಾಗಾಗಿ ಕನ್ನಡದ ರಂಗಭೂಮಿ ಬಡವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ರಂಗಭೂಮಿ ಇಂದಿಗೂ ಸಮೃದ್ಧವಾಗಿದೆ. ಅಲ್ಲಿನ ಶಾಲಾ ಪಠ್ಯದಲ್ಲಿಯೂ ಹೆಚ್ಚಿನ ನಾಟಕಗಳನ್ನು ಅಳವಡಿಸಲಾಗಿದೆ. ಆ ಮೂಲಕ ಮಕ್ಕಳಲ್ಲಿಯೇ ರಂಗಭೂಮಿ ಬಗ್ಗೆ ಆಸಕ್ತಿ ಬೆಳೆಸಲಾಗುತ್ತದೆ. ಇಲ್ಲಿ ಅಂತಹ ಪರಿಸ್ಥಿತಿ ಇಲ್ಲ ಎಂದು ವಿಷಾದಿಸಿದರು.

ಗಾಯಕ ಗರ್ತಿಕೆರೆ ರಾಘಣ್ಣ ಮಾತನಾಡಿದರು. ಬಾಬುಕೋಡಿ ಬಿ.ವಿ. ಕಾರಂತ ರಂಗಪ್ರತಿಷ್ಠಾನದ ಜಯರಾಮ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.