ADVERTISEMENT

ಕೃಷಿ ಚಟುವಟಿಕೆ ಆರಂಭಿಸಿದ ರೈತರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2017, 6:04 IST
Last Updated 13 ಜೂನ್ 2017, 6:04 IST
ಮೆಕ್ಕೆಜೋಳ ಬಿತ್ತನೆಗೆ ರೈತ ಭೂಮಿ ಸಜ್ಜುಗೊಳಿಸಿದ ರೀತಿ
ಮೆಕ್ಕೆಜೋಳ ಬಿತ್ತನೆಗೆ ರೈತ ಭೂಮಿ ಸಜ್ಜುಗೊಳಿಸಿದ ರೀತಿ   

ಶಿಕಾರಿಪುರ: ಮುಂಗಾರು ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ತಾಲ್ಲೂಕಿನ ಬಹುತೇಕ ರೈತರು ಭಾನುವಾರ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವುದು ಕಂಡು ಬಂದಿದೆ.
ಕಳೆದ ವರ್ಷ ಬರಗಾಲದಿಂದ ತತ್ತರಿಸಿದ ತತ್ತರಿಸಿದ್ದ ರೈತರು ಈ ವರ್ಷ  ಉತ್ತಮ ಮಳೆಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.

ಎರಡು ದಿನಗಳಿಂದ ತಾಲ್ಲೂಕಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲು ಪೂರಕವಾದ ಮಳೆಯಾಗಿದೆ. ಬಹುತೇಕ ರೈತರು ತಮ್ಮ ಹೊಲಗಳಲ್ಲಿ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.
ಗ್ರಾಮೀಣ ಭಾಗ ಹಾಗೂ ಪಟ್ಟಣದ ರೈತರು ತಮ್ಮ ಕುಟುಂಬದ ಸದಸ್ಯರು, ಕಾರ್ಮಿಕರು ಹಾಗೂ ಕೃಷಿ ಪರಿಕರಗಳೊಂದಿಗೆ ಕೃಷಿ ಭೂಮಿ ಕಡೆ ಎತ್ತಿನ ಬಂಡಿಯಲ್ಲಿ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.

ಇನ್ನು ಕೆಲವು ರೈತರು ಮುಂದಿನ ದಿನಗಳಲ್ಲಿ ಮಳೆ ಸುರಿಯುತ್ತದೆಯೋ ಇಲ್ಲವೋ ಎಂಬ ಆತಂಕದಿಂದ ಬಿತ್ತನೆ ಕಾರ್ಯ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ತಾಲ್ಲೂಕಿನಲ್ಲಿ 48.5 ಸಾವಿರ ಹೆಕ್ಟೇರ್‌ ಕೃಷಿ ಭೂಮಿ ಇದೆ. ಇದರಲ್ಲಿ ಸುಮಾರು 25 ಸಾವಿರ ಹೆಕ್ಟೇರ್‌ ಮೆಕ್ಕೆಜೋಳ ಹಾಗೂ 22 ಸಾವಿರ ಹೆಕ್ಟೇರ್‌ ಭತ್ತ ಬೆಳೆಯಲಾಗುತ್ತದೆ.

ADVERTISEMENT

ಉಳಿದ ಭೂಮಿಯಲ್ಲಿ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದರು. ಕೆಲವು ವರ್ಷಗಳಿಂದ ರೈತರು ಸುಮಾರು 2 ಸಾವಿರ ಹೆಕ್ಟೇರ್‌ನಲ್ಲಿ ವಾಣಿಜ್ಯ ಬೆಳೆ ಶುಂಠಿ ಬೆಳೆಯುತ್ತಿದ್ದಾರೆ.
ಶೇ 65ರಷ್ಟು ಮಳೆ ಕೊರತೆ ಕಂಡುಬಂದಿದೆ. ಮುಂದಿನ ದಿನಗಳಲ್ಲಾದರೂ ಉತ್ತಮ ಮಳೆ ಸುರಿಯಲಿ ಎಂದು ದೇವರನ್ನು ಪ್ರಾರ್ಥಿಸಿ ಕೃಷಿ ಚಟುವಟಿಕೆ ಆರಭಿಸಿದ್ದಾರೆ.

ಕೃಷಿ ಇಲಾಖೆಯಿಂದ ಬೀಜ ವಿತರಣೆ
ಕೃಷಿ ಚಟುವಟಿಕೆಗೆ ಅಗತ್ಯ ಗೊಬ್ಬರ, ಬಿತ್ತನೆ ಬೀಜ ಸೇರಿ ಇತರೆ ಕೃಷಿ ಪರಿಕರಗಳನ್ನು ಪಟ್ಟಣದ ಖಾಸಗಿ ಮಾರಾಟ ಮಳಿಗೆ ಹಾಗೂ ಕೃಷಿ ಇಲಾಖೆಯ ಕೇಂದ್ರಗಳಲ್ಲಿ ಖರೀದಿಸತೊಡಗಿದ್ದಾರೆ. ಕೃಷಿ ಚಟುವಟಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಿತ್ತನೆ ಬೀಜ ಹಾಗೂ ಇನ್ನಿತರ ಕೃಷಿ ಪರಿಕರಗಳನ್ನು ವಿತರಿಸುವ ಕಾರ್ಯವನ್ನು   ಕೃಷಿ ಇಲಾಖೆ ಮಾಡುತ್ತಿದೆ.

ಉತ್ತಮ ಮಳೆಗೆ ರೈತರ ಪ್ರಾರ್ಥನೆ
ತಾಲ್ಲೂಕಿನ ಸಾವಿರಾರು ಹೆಕ್ಟೇರ್‌ ಕೃಷಿ ಭೂಮಿಗೆ ನೀರು ಒದಗಿಸುವ ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯಗಳು ಕಳೆದ ವರ್ಷ ಬರಗಾಲದಿಂದಾಗಿ ಬರಿದಾಗಿದ್ದವು. ಈ ವರ್ಷವಾದರೂ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಲಿ ಎಂದು ಅಚ್ಚುಕಟ್ಟು ಭಾಗದ ರೈತರು ಆಶಿಸಿದ್ದಾರೆ. ಉತ್ತಮ ಮಳೆಗಾಗಿ ಪ್ರಾರ್ಥಿಸಿ ಕೆಲವೆಡೆ ದೇವಸ್ಥಾನಗಳಲ್ಲಿ  ವಿಶೇಷ ಪೂಜೆ ಸಲ್ಲಿಸಲಾಗಿದೆ.

48.5 ಸಾವಿರ ಹೆಕ್ಟೇರ್ ಕೃಷಿ ಭೂಮಿ
ಜೂನ್‌  11ರವರೆಗೆ 90 ಮಿ. ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ,  ಕೇವಲ 33 ಮಿ.ಮೀ ಮಳೆಯಾಗಿದೆ.

ರೈತರು  ಮೆಕ್ಕೆಜೋಳ ಬಿತ್ತನೆ ಬೀಜವನ್ನು   ಅಧಿಕೃತ ಮಾರಾಟಗಾರರಿಂದ  ಖರೀದಿಸಬೇಕು ಡಾ.ಬಿ.ಎನ್. ಪ್ರಭಾಕರ್
ಕೃಷಿ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.