ಸಾಗರ: ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ನಿಷೇಧ ಮಾಡುವ ಪ್ರಸ್ತಾವ ಹಿಂದಿರುವ ಹಲವು ಹುನ್ನಾರಗಳ ಜತೆಗೆ ಚಾಲಿ ಅಡಿಕೆಗೆ ಕಾವಿ ಬಣ್ಣ ಹಾಕಿ ಕಲಬೆರಕೆ ಮೂಲಕ ಕೆಂಪಡಿಕೆ ಮಾಡುವ ಅಕ್ರಮ ದಂಧೆಯ ಪಾತ್ರವೂ ಇರಬಹುದೆ ? ಇಂಥದೊಂದು ಪ್ರಶ್ನೆ ಈಗ ಮಲೆನಾಡಿನ ಅಡಿಕೆ ಮಾರುಕಟ್ಟೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ಈಗಾಗಲೇ ಹಲವು ಬಾರಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪ್ರಯೋಗಾಲಯಗಳು ನಡೆಸಿರುವ ವರದಿಗಳೇ ತಿಳಿಸಿವೆ. ಆದರೂ, ಮತ್ತೆ ಮತ್ತೆ ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಆರೋಪ ಕೇಳಿ ಬರುತ್ತಿರುವುದು ಯಾಕೆ ಎಂಬ ವಿಷಯದ ಜಾಡು ಹಿಡಿದು ಹೊರಟರೆ ದೊರಕುವುದು ಕಲಬೆರಕೆ ಎಂಬ ಕರಾಳ ದಂಧೆ ಯ ವಿವರಗಳು.
ಅಡಿಕೆ ವಹಿವಾಟು ಜೋರಾಗಿರುವಲ್ಲಿ ಕೆಲವು ವರ್ತಕರು ಚಾಲಿ ಅಡಿಕೆಗೆ ಕಾವಿ ಬಣ್ಣ ಬೆರೆಸುವ ಮೂಲಕ ಅದನ್ನೇ ಕೆಂಪಡಿಕೆ ಎಂದು ಹೊರ ರಾಜ್ಯಗಳಿಗೆ ಕಳುಹಿಸುವ ವಹಿವಾಟು ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ.
ಸಾಮಾನ್ಯವಾಗಿ ಅಡಿಕೆ ಮಾರುಕಟ್ಟೆಯಲ್ಲಿ ಚಾಲಿ ಅಡಿಕೆ ಕ್ವಿಂಟಲ್ಗೆ ರೂ. 13ರಿಂದ 15ಸಾವಿರ ಇದ್ದರೆ ಕೆಂಪಡಿಕೆಗೆ ರೂ.20ರಿಂದ 25ಸಾವಿರ ಇರುತ್ತದೆ. ಚಾಲಿ ಅಡಿಕೆಗೆ ಕಲಬೆರಕೆ ಮಾಡಿ ಕೆಂಪಡಿಕೆ ಮಾಡಿ ಹೊರ ರಾಜ್ಯಕ್ಕೆ ಕಳುಹಿಸಿದರೆ ಒಂದು ಲಾರಿ ಲೋಡ್ಗೆ ಕನಿಷ್ಠ ರೂ. 75ಸಾವಿರದಿಂದ ರೂ. 1ಲಕ್ಷದವರೆಗೆ ಲಾಭ ದೊರಕುತ್ತದೆ !
ಅಸಲಿ ಕೆಂಪಡಿಕೆ ತಯಾರಾಗುವುದು ಹಸಿ ಅಡಿಕೆ ಸುಲಿದ ಮೇಲೆ ಅದನ್ನು ಬೇಯಿಸುವಾಗ ಅಡಿಕೆಯಿಂದಲೇ ಹೊರಬರುವ ತೊಗರು ಬಣ್ಣವನ್ನು ಬಳಸುವ ಮೂಲಕ. ಕೊಯ್ಲಿನ ಆರಂಭದಲ್ಲಿ ಬೇಯಿಸಿದ ಅಡಿಕೆಗೆ ಬಣ್ಣ ಇಲ್ಲದಿದ್ದಲ್ಲಿ ನಂತರ ಬರುವ ತೊಗರಿನಲ್ಲಿ ಬಣ್ಣ ಹಾಕಿ ಒಣಗಿಸುತ್ತಾರೆ. ಕೆಲವೊಮ್ಮೆ ನೇರಳೆ ಅಥವಾ ಹೊನ್ನೆಮರದ ತೊಗಟೆಯನ್ನು ಕುದಿಸಿ ಅದರಿಂದ ಬರುವ ನೀರನ್ನು ಬಳಸುವುದು ಉಂಟು. ಇದು ಚಾಲಿಯಿಂದ ಕೆಂಪಡಿಕೆ ಮಾಡುವ ಸಹಜ ವಿಧಾನ.
ಕಲಬೆರಕೆ ದಂಧೆ ಮಾಡುವವರು ಪೆಟ್ರೋಲಿಯಂನ ಉಪ ಉತ್ಪನ್ನವಾಗಿರುವ ಕಾವಿ ಬಣ್ಣದ ಪುಡಿಯನ್ನು ಅಡಿಕೆಗೆ ಬೆರೆಸುತ್ತಾರೆ. ಇದರಲ್ಲಿನ ರಾಸಾಯನಿಕ ಅಂಶ ಮನುಷ್ಯನ ದೇಹ ಪ್ರವೇಶಿಸಿದರೆ ಆತನ ಆರೋಗ್ಯ ಹದಗೆಡುವುದು ಖಚಿತ.
ಹೀಗೆ ಕಲಬೆರಕೆ ಒಳಗಾದ ಅಡಿಕೆಯನ್ನೇ ಸ್ಯಾಂಪಲ್ ಎಂದು ಸಂಗ್ರಹಿಸಿ ಪ್ರಯೋಗಾಲ ಯಕ್ಕೆ ಕಳುಹಿಸಿದರೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತಾಗುವ ಅಪಾಯವಿದೆ. ಹೀಗಾಗಿ ಅಡಿಕೆ ಕಲಬೆರಕೆ ದಂಧೆ ಅಡಿಕೆ ಸೇವಿಸುವ ಗ್ರಾಹಕನಿಗೆ ಮಾರಕವಾಗುವ ಜತೆಗೆ ಬೆಳೆಗಾರರ ಅಸ್ತಿತ್ವಕ್ಕೆ ಧಕ್ಕೆ ತರುವ ಹಾನಿಯನ್ನು ಉಂಟು ಮಾಡಬಲ್ಲದು ಎನ್ನಲಾಗುತ್ತಿದೆ.
‘ಆಹಾರ ಕಲಬೆರಕೆ ತಡೆ ಕಾಯ್ದೆ ಅನ್ವಯ ಅಡಿಕೆಗೆ ಬಣ್ಣ ಹಾಕುವವರ ಮೇಲೆ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎನ್ನುತ್ತಾರೆ ತಾಲ್ಲೂಕಿನ ಆಹಾರ ಸುರಕ್ಷತಾ ಅಧಿಕಾರಿ ಮಂಜುನಾಥ್. ಏಕೆಂದರೆ, ಅಡಿಕೆ ಕಚ್ಚಾವಸ್ತು ಆಗಿದ್ದು ಅದು ಪಾನ್ ಮಸಾಲದಂತಹ ಆಹಾರದ ಸ್ವರೂಪ ಪಡೆದ ನಂತರವಾದರೆ ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತದೆ.
ಭಾರತೀಯ ದಂಡ ಸಂಹಿತೆ ಪ್ರಕಾರ ಪೊಲೀಸರಿಗೆ ಅಡಿಕೆ ಕಲಬೆರಕೆ ದಂಧೆ ಮಾಡುವವರ ಮೇಲೆ ಕ್ರಮ ಜರುಗಿಸುವ ಅವಕಾಶವಿದ್ದರೂ, ಕಲಬೆರಕೆ ಆಗಿದೆ ಎನ್ನುವ ಬಗ್ಗೆ ಪ್ರಯೋಗಾಲಯದ ದೃಢೀಕೃತ ವರದಿ ಬೇಕಾಗುವುದರಿಂದ ಇದುವರೆಗೂ ಪೊಲೀಸರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿಲ್ಲ ಎಂದು ತಿಳಿದು ಬಂದಿದೆ.
ಹಾಗೆ ನೋಡಿದರೆ ಅಡಿಕೆ ಕಲಬೆರಕೆ ದಂಧೆ ತೀರಾ ಗುಟ್ಟಾಗಿ ಏನೂ ನಡೆಯುತ್ತಿಲ್ಲ. ಅಡಿಕೆ ಮಾರುಕಟ್ಟೆಯಲ್ಲಿ ಇರುವ ವ್ಯಕ್ತಿಗಳಿಂದಲೇ ಈ ವಹಿವಾಟು ನಡೆಯುತ್ತಿದೆ. ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಜಯಂತ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ‘ಕಾವಿ ಬಣ್ಣ ಬೆರೆಸುತ್ತಿಲ್ಲ, ಐಎಸ್ಐ ಗುರುತು ಇರುವ, ಆರೋಗ್ಯಕ್ಕೆ ಹಾನಿಕರವಲ್ಲದ ಬಣ್ಣ ಬಳಸುತ್ತಿದ್ದೇವೆ ಎಂದು ವರ್ತಕರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ಕರೆಯುವಂತೆ ಅವರಿಗೆ ಹೇಳಿದ್ದೇನೆ’ ಎಂದು ತಿಳಿಸಿದರು.
ಕೆಂಪಡಿಕೆ ತಯಾರಿಕೆ ಎಂದಿನ ಸಹಜ ಪ್ರಕ್ರಿಯೆಯಲ್ಲಿ ನಡೆಯುತ್ತಿದೆಯೆ ಇಲ್ಲವೇ ಎನ್ನುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕಿದೆ. ಅಡಿಕೆ ನಿಷೇಧದ ವಿರುದ್ಧ ಹೋರಾಟ ಮಾಡುತ್ತಿರುವ ಬೆಳೆಗಾರರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂಬ ಮಾತು ಕೇಳಿ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.