ADVERTISEMENT

ತತ್ವ, ಸಿದ್ಧಾಂತಕ್ಕೆ ಮತ್ತೊಂದು ಹೆಸರು ವಾಜಪೇಯಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 5:56 IST
Last Updated 26 ಡಿಸೆಂಬರ್ 2012, 5:56 IST

ಸಾಗರ: ಭಾರತದ ರಾಜಕಾರಣದಲ್ಲಿ ಆದರ್ಶ, ತತ್ವ, ಸಿದ್ಧಾಂತಕ್ಕೆ ಮತ್ತೊಂದು ಹೆಸರು ವಾಜಪೇಯಿ ಎಂದರೆ ಯಾವುದೇ ಉತ್ಪ್ರೇಕ್ಷೆ  ಆಗುವುದಿಲ್ಲ ಎಂದು ಸಂಘ ಪರಿವಾರದ ಪ್ರಮುಖರಾದ ಅ.ಪು.ನಾರಾಯಣಪ್ಪ ಹೇಳಿದರು.

ಇಲ್ಲಿನ ಭಾರತೀಯ ಜನತಾ ಪಕ್ಷ ಮಂಗಳವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟು ಹಬ್ಬ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಒಬ್ಬ ರಾಜಕಾರಣಿ ಹೇಗಿರಬೇಕು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ವಾಜಪೇಯಿ ಅವರ ಜೀವನ ಆಗಿದೆ. ಅತ್ಯುನ್ನತ ಅಧಿಕಾರ ಪಡೆದರೂ ಸರಳವಾಗಿ, ನಿಸ್ವಾರ್ಥದಿಂದ ಇರಲು ಸಾಧ್ಯ ಎಂದು ತೋರಿಸಿಕೊಟ್ಟವರು ವಾಜಪೇಯಿ ಎಂದರು.

ಮೊದಲು ರಾಷ್ಟ್ರ, ನಂತರ ಧರ್ಮ ಹಾಗೂ ಪಕ್ಷ ಎಂಬ ಭಾವನೆಯನ್ನು ವಾಜಪೇಯಿ ಹೊಂದಿದ್ದರು.ಆದರೆ ಇತ್ತೀಚಿಗೆ ಮೊದಲು ನಾನು,ನಂತರ ಪಕ್ಷ ಎನ್ನುವವರ ಸಂಖ್ಯೆ ಹೆಚ್ಚುತ್ತಿರುವುದು ವಿಷಾದದ ಸಂಗತಿ. ತಾವು ನಂಬಿದ ಸಿದ್ದಾಂತ ದೊಂದಿಗೆ ಎಂದೂ ರಾಜಿಯಾಗದ ವಾಜಪೇಯಿ ಅವರಿಂದ ಅಂತರರಾಷ್ಟ್ರೀಯ ಮಟ್ಟದಲ್ಲೂ ಭಾರತದ ಗೌರವ ಹೆಚ್ಚಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಬೇಂಗ್ರೆ, ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್ ಬಾಬು, ಪಕ್ಷದ ಪ್ರಮುಖರಾದ ಎಸ್.ವಿ. ಕೃಷ್ಣಮೂರ್ತಿ, ಶರಾವತಿ ಸಿ. ರಾವ್, ಸಂತೋಷ್ ಶೇಟ್, ನಾಗರಾಜ್ ಪೈ ಹಾಜರಿದ್ದರು.

ಪರಸ್ಪರ ಸಕರಿಸಿ
ಶಿಕಾರಿಪುರ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಸ್ಪರ ಕೈ ಜೋಡಿಸಿ ಕಾರ್ಯ ನಿರ್ವಸಿದಾಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದು ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕು ಕಚೇರಿ ಅವರಣದಲ್ಲಿ ಮಂಗಳವಾರ ಕಂದಾಯ ಇಲಾಖೆಯ ವಾಜಪೇಯಿ ಜನಸ್ನೇಹಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಸರ್ಕಾರದ ಯೋಜನೆಗಳು ತಲುಪುವಂತಾಗಬೇಕು ಎಂದು ಸರ್ಕಾರ ಒಬ್ಬ ಪುಣ್ಯಾತ್ಮ ಮಾಜಿ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ಜನ್ಮ ದಿನದ ಅಂಗವಾಗಿ ವಾಜಪೇಯಿ ಜನ ಸ್ನೇಹಿ ಕೇಂದ್ರದ ಉದ್ಘಾಟನೆ ಜತೆಗೆ ರಾಷ್ಟ್ರೀಯ ಉತ್ತಮ ಆಡಳಿತ ದಿನ ಎಂದು ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಶ್ಲಾಘನೀಯವಾಗಿದೆ.

ಕಚೇರಿಗೆ ಬರುವ ಸಾಮಾನ್ಯ ಜನರ ಕಾರ್ಯಗಳನ್ನು ಮಾಡುವ ಮೂಲಕ ಈ ತಾಲ್ಲೂಕು ಕಚೇರಿಗೆ ಒಳ್ಳೆ ಹೆಸರು ತರುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಪ್ರಸ್ತುತ ತಹಶೀಲ್ದಾರ್ ಶಿವಕುಮಾರ್  ಅವರು ಕಚೇರಿಯಲ್ಲಿ ಪಾರದರ್ಶಕತೆ ಕಾಪಾಡಲು ಸಿಸಿ ಟಿವಿ ಕ್ಯಾಮೆರಗಳನ್ನು ಅಳವಡಿಸಿರುವುದು ಉತ್ತಮ ಬೆಳವಣಿಗೆ ಎಂದ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ತಾಲ್ಲೂಕಿನ ಅಭಿವೃದ್ಧಿಗಾಗಿ ಹಲವು ವರ್ಷಗಳ ಕಾಲ ಶ್ರಮಿಸಿದ ಫಲವಾಗಿ ನಂಜುಡಪ್ಪ ವರದಿ ಪ್ರಕಾರ ಹಿಂದುಳಿದ ತ್ಲ್ಲಾಲೂಕಾಗಿದ್ದ ಈ ತಾಲ್ಲೂಕು ಇಂದು ರಾಜ್ಯದಲ್ಲಿ ಅಭಿವೃದ್ಧಿಯಲ್ಲಿ ಪ್ರಥಮವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ತಹಶೀಲ್ದಾರ್ ಕೆ.ಎಚ್. ಶಿವಕುಮಾರ್ ಮಾತನಾಡಿದರು.
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಚಂದ್ರಶೇಖರ್, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಹಾಲಪ್ಪ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಕೆ.ಎಸ್. ಗುರುಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್. ಮೋಹನ್, ಟಿಎಪಿಎಂಎಸ್ ಮಾಜಿ ಅಧ್ಯಕ್ಷ ಚಾರಗಲ್ಲಿ ಪರಶುರಾಮ್, ಕಸಬಾ ಸಹಕಾರ ಸಂಘ ಮಾಜಿ ಅಧ್ಯಕ್ಷ ಬೆಣ್ಣೆ ದೇವೇಂದ್ರಪ್ಪ, ರುದ್ರಪಯ್ಯ, ಉಪತಹಶೀಲ್ದಾರ್ ಎನ್.ಜೆ. ನಾಗರಾಜ್,ಶೀರಸ್ಥೇದಾರ್ ರಾಜೀವ್, ರಾಜಸ್ವ ನೀರಿಕ್ಷಕ ಕೂಲೇರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.