ಸೊರಬ: ದಂಡಾವತಿ ಆಣೆಕಟ್ಟು ಯೋಜನಾ ಪ್ರದೇಶದ ಮುಳುಗಡೆ ಸಂತ್ರಸ್ತರು ಗುರುವಾರ ರಸ್ತೆ ತಡೆ ನಡೆಸಿ ನಡಹಳ್ಳಿ ಗ್ರಾಮದ ಬಳಿ ಪ್ರತಿಭಟನೆ ನಡೆಸಿದರು.
ಜಮೀನು ಸರ್ವೆ ನಡೆಸಲು ಅಧಿಕಾರಿಗಳು ಬರುತ್ತಾರೆಂಬ ಸುದ್ದಿ ತಿಳಿದ ರೈತರು ಬುಧವಾರ ರಾತ್ರಿ ಟೈರ್ಗೆ ಬೆಂಕಿ ಹಚ್ಚಿ ರಸ್ತೆಗೆ ಅಡ್ಡಲಾಗಿಟ್ಟು, ಸ್ಥಳದಲ್ಲಿ ಜಮಾಯಿಸಿ ಸರ್ಕಾರ, ಸ್ಥಳೀಯ ಶಾಸಕರ ವಿರುದ್ಧ ಧಿಕ್ಕಾರ ಕೂಗುತ್ತಾ ಪ್ರತಿಭಟಿಸಿದರು.
ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿ ಬಳಿ ಈ ಭಾಗದ ರೈತರಿಗೆ ಮುಕ್ತ ಚರ್ಚೆ ನಡೆಸಲು ಅವಕಾಶ ಕಲ್ಪಿಸಬೇಕು, ಈಗಾಗಲೇ ಹೊರಡಿಸಿರುವ 4(1), 6(1) ಅಧಿಸೂಚನೆ ಹಿಂಪಡೆಯಬೇಕು. ಈ ಹಿಂದೆ ಸಭೆಯಲ್ಲಿ ಚರ್ಚಿಸಿದ ವಿಷಯಕ್ಕೆ ಅಧಿಕಾರಿಗಳು ಲಿಖಿತ ಉತ್ತರ ಕೊಡಬೇಕು. ಸರ್ವೆ ಕಾರ್ಯ ನಡೆಸುವ ಬಗ್ಗೆ ಅಧಿಕಾರಿಗಳು ಲಿಖಿತ ಉತ್ತರ ಕೊಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ರೈತರ ಅಹವಾಲು ಸ್ವೀಕರಿಸಿದ ಅಧಿಕಾರಿಗಳು, ಮನವಿಯನ್ನು ಸರ್ಕಾರದ ಮೇಲಾಧಿಕಾರಿಗೆ ತಿಳಿಸಲಾಗುವುದು ಹಾಗೂ ಇಂದಿನ ಸರ್ವೆ ಕಾರ್ಯ ಸ್ಥಗಿತಗೊಳಿಸಲಾಗುವುದು ಎಂದರು.
ದಂಡಾವತಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ವಾಮದೇವಗೌಡ ಮಾತನಾಡಿ, ಯೋಜನೆಗೆ ಬಿಡುಗಡೆಯಾದ ಶೇ 26ರಷ್ಟು ಹಣ ಬೇರೆ ಕಾಮಗಾರಿಗೆ ಬಳಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಸುಮಾರು ರೂ. 60 ಕೋಟಿಗಳಷ್ಟು ಅವ್ಯವಹಾರ ನಡೆದಿದ್ದೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.
ಶ್ರೀಪಾದ ಹೆಗಡೆ ನಿಸರಾಣಿ, ಬರಗಿ ನಿಂಗಪ್ಪ, ಮಂಜಪ್ಪ ಬನದಕೊಪ್ಪ, ಜೆ.ಎಸ್. ಚಿದಾನಂದ ಗೌಡ, ಶಿವಪ್ಪ ನಡಹಳ್ಳಿ, ವಸಂತ ಬಂಗೇರ, ಕುಪ್ಪೆ ಜಗದೀಶ, ರೇಣುಕಮ್ಮ, ಬಸಪ್ಪ ಚೀಲನೂರು, ಬೈರಪ್ಪ, ಸೋಮಶೇಖರ, ಹಾಲೇಶ, ಲೋಕೇಶ ಹಾಗೂ ಸಂತ್ರಸ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.