ADVERTISEMENT

ಪಿಎಸ್‌ಐ ಅನುಚಿತ ವರ್ತನೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 12:05 IST
Last Updated 18 ಸೆಪ್ಟೆಂಬರ್ 2011, 12:05 IST

ಭದ್ರಾವತಿ: ಇಲ್ಲಿನ ಹಿರಿಯ ವಕೀಲ ಮಂಜಪ್ಪ ಅವರ ಜತೆ ಅನುಚಿತ ವರ್ತನೆ ನಡೆಸಿದ ಹಳೇನಗರ ಠಾಣೆ  ಪಿಎಸ್‌ಐ ಸುರೇಶ್ ಅವರ ಅಮಾನತಿಗೆ ಆಗ್ರಹಿಸಿ ವಕೀಲರು ಶನಿವಾರ ಠಾಣೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಮಂಜಪ್ಪ ಅವರು ತಮ್ಮ ಕುಟುಂಬ ಸದಸ್ಯರ ಜತೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ತಡೆ ಮಾಡಿದ ಸುರೇಶ್ ವಾಹನ ದಾಖಲೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ಮಂಜಪ್ಪ ನೀಡಿದ ಗ್ಯಾಸ್ ದಾಖಲೆ ಪಡೆದ ಸುರೇಶ್ ಅವರು ಮೊಬೈಲ್ ಕ್ಯಾಮೆರಾದಲ್ಲಿ ಭಾವಚಿತ್ರ ತೆಗೆಯುವ ಯತ್ನ ನಡೆಸಿದ್ದಾರೆ.

ಇದನ್ನು ಪ್ರಶ್ನಿಸಿದ ಮಂಜಪ್ಪ ಅವರನ್ನು ಠಾಣೆಗೆ ಬರುವಂತೆ ತಿಳಿಸಿದ ಅವರು, ಅಲ್ಲೂ ಸಹ ಅನುಚಿತ ವರ್ತನೆ ನಡೆಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ವಕೀಲರು ಠಾಣೆ ಮುಂದೆ ಜಮಾಯಿಸಿ ಸುರೇಶ್ ಅಮಾನತಿಗೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ಡಿ. ಶ್ರೀಧರ್, ಎಸ್‌ಐ ಕೆ. ಕುಮಾರ್ ಪರಿಸ್ಥಿತಿ ತಿಳಿಗೊಳಿಸುವ ಯತ್ನ ನಡೆಸಿದರು. ಇದಕ್ಕೆ ವಕೀಲರಿಂದ ಸೂಕ್ತ ಸ್ಪಂದನೆ ದೊರೆಯದ ಸಂದರ್ಭದಲ್ಲಿ ಪಿಎಸ್‌ಐ ಹಾಗೂ ಮಂಜಪ್ಪ ಅವರ ಜತೆ ಮಾತುಕತೆ ನಡೆಸಿದರು.

ನಂತರ ವಕೀಲರು ಸುರೇಶ್ ವಿರುದ್ಧ ನೀಡಿದ ದೂರನ್ನು ಸ್ವೀಕರಿಸಿದ ಡಿವೈಎಸ್‌ಪಿ ಶೀಘ್ರ ಈ ಘಟನೆ ಕುರಿತಂತೆ ಕ್ರಮ ಜರುಗಿಸುವ ಭರವಸೆ ನೀಡಿದರು. ವಕೀಲರ ಪ್ರತಿಭಟನೆ ವೇಳೆ ಇನ್ನಿತರೆ ನಾಗರಿಕರು ಸಹ ಎಸ್‌ಐ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಡಿವೈಎಸ್‌ಪಿ ಅವರಿಗೆ ದೂರು ನೀಡಿದ ಘಟನೆ ಸಹ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎ.ಬಿ. ನಂಜಪ್ಪ ಪ್ರತಿಭಟನೆಯನ್ನು ತಾತ್ಕಾಲಿವಾಗಿ ಹಿಂದಕ್ಕೆ ಪಡೆದಿದ್ದು, ಸೋಮವಾರ ಎಸ್‌ಐ ಸುರೇಶ್ ವಿರುದ್ಧ ಕ್ರಮ ಜರುಗಿಸದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.