ಭದ್ರಾವತಿ: `ವಿಐಎಸ್ಎಲ್ ಕಾರ್ಖಾನೆ ಅಭಿವೃದ್ಧಿಗೆ ಉಕ್ಕು ಪ್ರಾಧಿಕಾರ (ಸೈಲ್) ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆ ರೂಪಿಸಿದೆ ಎಂದು ಅಧ್ಯಕ್ಷ ಸಿ.ಎಸ್. ವರ್ಮಾ ಹೇಳಿದರು.
ಕಾರ್ಖಾನೆಗೆ ಶುಕ್ರವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಖಾನೆ ವಿಶೇಷವಾಗಿ ರಕ್ಷಣಾ ಇಲಾಖೆ, ರೈಲ್ವೇಸ್ ಮತ್ತು ಮೋಟಾರ್ ವಾಹನ ತಯಾರಿಕಾ ಕ್ಷೇತ್ರಕ್ಕೆ ತನ್ನ ಕೊಡುಗೆ ನೀಡುತ್ತಿದೆ ಎಂದು ವಿವರಿಸಿದರು.
ಇಲ್ಲಿರುವ ಕಾರ್ಮಿಕರಲ್ಲಿ ನೈಪುಣ್ಯತೆ, ಕಾರ್ಯಕ್ಷಮತೆ ಹೆಚ್ಚಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಈ ಕಾರ್ಖಾನೆಯನ್ನು ಹಿಂದಿನ ವೈಭವಕ್ಕೆ ಮರುಕಳಿಸುವ ಪ್ರಯತ್ನ ಮಾಡಲಾಗುವುದು ಎಂಬ ಆಶಾಭಾವನೆ ವ್ಯಕ್ತ ಮಾಡಿದರು.
ಮುಂದಿನ ವರ್ಷಗಳಲ್ಲಿ ವಿಐಎಸ್ಎಲ್ ಕಾರ್ಖಾನೆ ಮಾರುಕಟ್ಟೆಯಲ್ಲಿ ಶೇ. 9ರಷ್ಟು ಪಾಲನ್ನು ವೃದ್ಧಿಸಿಕೊಳ್ಳಲಿದೆ. ಇದಕ್ಕೆ ಆವಶ್ಯವಿರುವ ಯೋಜನೆ, ಆಧುನಿಕತೆ ರೂಪಿಸುವಲ್ಲಿ ಸೈಲ್ ಆಡಳಿತ ಕ್ರಮ ತೆಗೆದುಕೊಳ್ಳಲಿದೆ ಎಂದರು.
2012-13ನೇ ಸಾಲಿನ ವೇಳೆಗೆ ಉಕ್ಕು ಪ್ರಾಧಿಕಾರ 24ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿಯನ್ನು ಹೊಂದಿದೆ. ಇದರ ಸಾಧನೆಗಾಗಿ ವಿವಿಧ ಘಟಕಗಳ ಅಭಿವೃದ್ಧಿಗಾಗಿ ಯೋಜನೆ ಸಿದ್ಧಗೊಳಿಸಿ ಇದಕ್ಕಾಗಿ ್ಙ 72,000ಕೋಟಿ ಅಗತ್ಯವಿದೆ. ಈಗಾಗಲೇ ್ಙ 26,000 ಕೋಟಿ ವೆಚ್ಚ ಮಾಡಿದ್ದು, ಆಧುನೀಕರಣ ಕ್ರಮಗಳ ಶೀಘ್ರ ಬೆಳವಣಿಗೆ ಸಾಗಬೇಕಿದೆ ಎಂದರು.
ಬೋಕಾರೋ ಹಾಗೂ ಬರ್ನಪುರ್ ಸ್ಟೀಲ್ ಪ್ಲಾಂಟ್ಗಳ ಆಧುನೀಕರಣ ಕೆಲಸ ಮುಕ್ತಾಯ ಹಂತ ತಲುಪಿದೆ. 2011-12ನೇ ಸಾಲಿನ ವೇಳೆಗೆ ರಾಡ್ಮಿಲ್ ಹಾಗೂ ಸಿಂಟರಿಂಗ್ ಪ್ಲಾಂಟ್ಗಳು ಕಾರ್ಯಾರಂಭ ಮಾಡಲಿವೆ. 2020ರ ವೇಳೆಗೆ ಉಕ್ಕು ಪ್ರಾಧಿಕಾರ ತನ್ನ ಬಿಸಿಲೋಹ ಉತ್ಪಾದನಾ ಪ್ರಮಾಣವನ್ನು 45-60ದಶಲಕ್ಷ ಟನ್ಗೆ ಹೆಚ್ಚಿಸಿಕೊಳ್ಳುವ ವಿಶ್ವಾಸ ಹೊಂದಿದೆ ಎಂದು ನುಡಿದರು.
ವಿಐಎಸ್ಎಲ್ ಕಾರ್ಖಾನೆಗೆ ಆವಶ್ಯವಿರುವ ಗಣಿ ಮಂಜೂರಾತಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ಕೇಂದ್ರದ ಗಣಿ ಇಲಾಖೆ ಮಂಜೂರಾತಿ ದೊರೆತ ಕೂಡಲೇ ಸೈಲ್ ಗಣಿ ಪ್ರದೇಶವನ್ನು ತನ್ನ ವಶಕ್ಕೆ ಪಡೆದು ಅದಿರು ಸಂಗ್ರಹಣೆಗೆ ಮುಂದಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗೋಷ್ಠಿಯಲ್ಲಿ ಅಧಿಕಾರಿಗಳಾದ ವಿ.ಜಿ. ಶಂಕರ್, ವಿಜಯ ಹೊರ್ಗಿಯಾರ್, ಎನ್. ಕೊಠಾರಿಯನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.