ADVERTISEMENT

ಸಾಲ ಮನ್ನಾ ಮೊತ್ತ ಬಿಡುಗಡೆ ಮಾಡದಿರಲು ಆದೇಶ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 9:04 IST
Last Updated 2 ಏಪ್ರಿಲ್ 2013, 9:04 IST

ಶಿವಮೊಗ್ಗ: ಸಾಲ ಮನ್ನಾ ಯೋಜನೆಯಲ್ಲಿ ಸರ್ಕಾರ ಬಿಡುಗಡೆ ಮಾಡಿದ ರೂ 20,345 ಲಕ್ಷ ಹಣವನ್ನು ಡಿಸಿಸಿ ಬ್ಯಾಂಕು ಮತ್ತು ಪ್ರಾಥಮಿಕ ವ್ಯವಸಾಯ ಸಹಕಾರ ಸೇವಾ ಸಂಘಗಳಿಗೆ ಬಿಡುಗಡೆ ಮಾಡದಂತೆ ಸಹಕಾರ ಸಂಘಗಳ ಅಪರ ನಿಬಂಧಕರು ಆದೇಶ ಹೊರಡಿಸಿದ್ದಾರೆ.

ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಬಿಡುಗಡೆ ಆದೇಶದಲ್ಲಿರುವ ಮೊತ್ತವನ್ನು ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಸಂಬಂಧಪಟ್ಟ ಡಿಸಿಸಿ ಬ್ಯಾಂಕುಗಳಿಗೆ ಬಿಡುಗಡೆ ಮಾಡಕೂಡದು ಎಂದು ಅವರು ತಾಕೀತು ಮಾಡಿದ್ದಾರೆ.

ಒಂದು ವೇಳೆ ಈಗಾಗಲೇ ಬಿಡುಗಡೆಯಾಗಿದ್ದಲ್ಲಿ ಡಿಸಿಸಿ ಬ್ಯಾಂಕುಗಳು ಸಂಬಂಧಪಟ್ಟ ಪ್ರಾಥಮಿಕ ವ್ಯವಸಾಯ ಸಹಕಾರ ಸೇವಾ ಸಂಘಗಳಿಗೆ ಬಿಡುಗಡೆ ಮಾಡಬಾರದು. ನೀತಿ ಸಂಹಿತೆ ಅವಧಿ ಮುಕ್ತಾಯವಾದ ನಂತರ ಈ ನಿರ್ದೇಶನ ತನ್ನಿಂದ ತಾನೇ ರದ್ದುಗೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.

ಸಂಬಂಧಪಟ್ಟ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಬಿಡುಗಡೆಯಾಗಬೇಕಾದ ಈ ಮೊತ್ತವನ್ನು ಅಪೆಕ್ಸ್ ಬ್ಯಾಂಕ್ ಜಿಲ್ಲಾ ಬ್ಯಾಂಕುಗಳ ಹೆಸರಿನಲ್ಲಿ ಹಾಗೂ ಜಿಲ್ಲಾ ಬ್ಯಾಂಕುಗಳು ಸಂಬಂಧಿಸಿದ ವ್ಯವಸಾಯ ಸಹಕಾರ ಸೇವಾ ಸಂಘಗಳ ಹೆಸರಿನಲ್ಲಿ ಠೇವಣಿ ಇಡಬೇಕು ಎಂದು ಸಹಕಾರ ಸಂಘಗಳ ಅಪರ ನಿಬಂಧಕ ಎಂ.ಜಿ. ಪಾಟೀಲ್ ಸೂಚಿಸಿದ್ದಾರೆ.

ಸರ್ಕಾರ, 2013ರ ಮಾರ್ಚ್ 26ರಂದು ಅಪೆಕ್ಸ್ ಬ್ಯಾಂಕ್‌ಗೆ ರೂ 20,345 ಲಕ್ಷ ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.