ADVERTISEMENT

ಸೊರಬ: 9 ದಿನದ ಉತ್ಸವಕ್ಕೆ ವೈಭವದ ತೆರೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 9:55 IST
Last Updated 8 ಅಕ್ಟೋಬರ್ 2011, 9:55 IST

ಸೊರಬ: ಪಟ್ಟಣದ ನಾಡಹಬ್ಬ ದಸರಾ ಉತ್ಸವ ಸಮಿತಿ ವತಿಯಿಂದ 9 ದಿನಗಳ ಕಾಲ ಹಮ್ಮಿಕೊಂಡಿದ್ದ ಉತ್ಸವಕ್ಕೆ ಗುರುವಾರ ವೈಭವದ ತೆರೆ ಎಳೆಯಲಾಯಿತು.

ಮೆರವಣಿಗೆ ಮೂಲಕ ಪಟ್ಟಣದ ದೇವತೆಗಳ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಶಾಸಕ ಎಚ್. ಹಾಲಪ್ಪ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಎಚ್.ಬಿ. ಗಂಗಾಧರಪ್ಪ, ಉತ್ಸವ ಸಮಿತಿ ಸದಸ್ಯರು, ಪುರ ಗಣ್ಯರು ಪಾಲ್ಗೊಂಡು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡರು.

ಪುರಾಣ ಪ್ರಸಿದ್ಧ ಚಂದ್ರಗುತ್ತಿಯಲ್ಲಿ ದಸರಾ ಹಬ್ಬದ ಅಂಗವಾಗಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಹಸ್ರಾರು ಭಕ್ತಾಧಿಗಳು ಪೂಜೆ ಸಲ್ಲಿಸಿ, ಬನ್ನಿ ವಿನಿಮಯ ಮಾಡಿ, ಪರಸ್ಪರ ಶುಭ ಹಾರೈಸಿದರು.

ನೂಕು ನುಗ್ಗಲು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ಮಧ್ಯೆ ದೇಗುಲದ ಪ್ರಾಚೀನ ಮೆಟ್ಟಿಲು ಭಗ್ನಗೊಂಡಿದ್ದು, ಭಕ್ತರಲ್ಲಿ ಆತಂಕ ಉಂಟು ಮಾಡಿತು. ಪ್ರತಿ ವರ್ಷ ದಸರಾ ವೇಳೆ ಸಹಸ್ರಾರು ಭಕ್ತರು ಆಗಮಿಸುತ್ತಾರೆ ಎಂದು ಗೊತ್ತಿದ್ದರೂ ತಾಲ್ಲೂಕು ಆಡಳಿತ ಸಮರ್ಪಕ ವ್ಯವಸ್ಥೆ ಕಲ್ಪಿಸಿಲ್ಲ.

ಮೂಲ ಸೌಕರ್ಯ ನೀಡಲು ಮುಂದಾಗದ ಗ್ರಾ.ಪಂ. ಆಡಳಿತ ಭಕ್ತರಿಗೆ ಅನಗತ್ಯ ಸುಂಕ ವಿಧಿಸುತ್ತಿರುವುದು ಅಕ್ರಮವಾಗಿದ್ದು, ಸ್ಥಗಿತಗೊಳಿಸಲು ಗ್ರಾಮಸ್ಥರು ನೀಡಿದ ಮನವಿಗೆ ಮೊದಲು ಸ್ಪಂದಿಸಿದ್ದ ತಾ.ಪಂ. ಇಒ, ನಂತರ ನಿಗದಿತ ಪ್ರಮಾಣದಲ್ಲಿ ವಸೂಲಾತಿ ಮಾಡಿ ಎಂದು ಗ್ರಾ.ಪಂ.ಗೆ ತಿಳಿಸಿದ್ದಾರೆ.
 
ಇದು ಅಧಿಕಾರಿಯ ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನೆ ಮೂಡಿಸುತ್ತದೆ ಎಂದು ಆರೋಪಿಸಿದ ಗ್ರಾಮಸ್ಥರು, ಅವ್ಯವಸ್ಥೆ ಸರಿಪಡಿಸುವ ಇಚ್ಛಾಶಕ್ತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಗ್ರ ಹೋರಾಟದ ಎಚ್ಚರಿಕೆನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.