ADVERTISEMENT

ಸೋರುತಿಹುದು ಲಕ್ಷ್ಮೀನರಸಿಂಹ ದೇಗುಲ

ಭದ್ರಾವತಿ: ಪ್ರಾಚ್ಯವಸ್ತು ಸಂಗ್ರಹಾಲಯ, ಪರಂಪರೆ ಇಲಾಖೆ ಅಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 10:28 IST
Last Updated 22 ಜುಲೈ 2013, 10:28 IST
ಭದ್ರಾವತಿಯ ಹಳೇನಗರದಲ್ಲಿರುವ ಪುರಾಣ ಪ್ರಸಿದ್ಧ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ಭಾನುವಾರ ಮೈಸೂರು ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಅಧಿಕಾರಿ ಶಿವಾನಂದ ಕಂಠಿ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದರು .
ಭದ್ರಾವತಿಯ ಹಳೇನಗರದಲ್ಲಿರುವ ಪುರಾಣ ಪ್ರಸಿದ್ಧ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ಭಾನುವಾರ ಮೈಸೂರು ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಅಧಿಕಾರಿ ಶಿವಾನಂದ ಕಂಠಿ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದರು .   

ಭದ್ರಾವತಿ: ಪುರಾಣ ಪ್ರಸಿದ್ಧ ಲಕ್ಷ್ಮೀನರಸಿಂಹ ದೇವಾಲಯದ ಹೊರಭಾಗದ ಶಿಲಾ ಪದರದ ನಡುವೆ ಬೆಳೆದಿರುವ ಗಿಡ, ಗಂಟೆಗಳ ಸಾಲಿನಿಂದ ದೇವಸ್ಥಾನ ಒಳ ಭಾಗದಲ್ಲಿ ನೀರು ಜಿನುಗುತ್ತಿದೆ.

12ನೇ ಶತಮಾನದ ಹೊಯ್ಸಳರ ಕಾಲದಲ್ಲಿ ನಿರ್ಮಿತವಾಗಿರುವ ಈ ದೇವಾಲಯಕ್ಕೆ ಭಾನುವಾರ ಮೈಸೂರು ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಅಧಿಕಾರಿ ಭೇಟಿ ನೀಡಿ ನೀರು ಸೋರಿಕೆ ಬಗ್ಗೆ ಪರಿಶೀಲನೆ ನಡೆಸಿದರು.

ಸರ್ಕಾರ 2013-14ನೇ ಸಾಲಿನಲ್ಲಿ ಬಿಡುಗಡೆ ಮಾಡಿರುವ ರೂ 10ಲಕ್ಷ ಯೋಜನಾ ವಿವರಣಾ ಪಟ್ಟಿ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ್ದ ಶಿವಾನಂದ ಕಂಠಿ ಅವರು ದೇವಸ್ಥಾನ ವೀಕ್ಷಣೆ ನಡೆಸಿ ಹಲವು ಕ್ರಮಗಳ ಕುರಿತಂತೆ ವ್ಯವಸ್ಥಾಪನಾ ಸಮಿತಿ ಜತೆ ಸಮಾಲೋಚಿಸಿದರು.

ದೇವಾಲಯ ಹೊರಭಾಗದ ಶಿಲಾ ಪದರದ ನಡುವೆ ಬೆಳೆದಿರುವ ಗಿಡಗಳ ಸಾಲು, ಕಲ್ಲುಗಳ ನಡುವೆ ಬಿರುಕು ಸೃಷ್ಟಿಗೆ ಕಾರಣವಾಗಿದೆ. ಇದರಿಂದಾಗಿ ನೀರು ಸರಾಗವಾಗಿ ದೇವಸ್ಥಾನದ ಒಳ ಭಾಗದ ಪದರಕ್ಕೆ ಸಾಗುತ್ತಿದ್ದು, ಶೀತ ವಾತಾವರಣ ಸೃಷ್ಟಿಸಿದೆ.

ಇದು ಹೀಗೆಯೇ ಮುಂದುವರಿದರೆ ಕಲ್ಲುಗಳ ನಡುವಿನ ಬಿರುಕು ಹೆಚ್ಚುವ ಜತೆಗೆ ಒಳ ಭಾಗದ ಪದರಕ್ಕೂ ತೊಂದರೆ ಎದುರಾಗುವ ಸಾಧ್ಯತೆ ಇದೆ. ಈ ವಿಚಾರವನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯರಾದ ಸುಬ್ರಹ್ಮಣ್ಯ, ಜನಾರ್ಧನ ಅಯ್ಯಂಗಾರ್, ಸಹಾಯಕ ಅರ್ಚಕ ಶ್ರೀನಿವಾಸ್ ಅಧಿಕಾರಿಗಳ ಗಮನಕ್ಕೆ ತಂದರು.

ದೇವಸ್ಥಾನ ವೀಕ್ಷಿಸಿದ ಅಧಿಕಾರಿಗಳು ನೀರು ಸೋರಿಕೆ ತಡೆಗೆ ಮಾಡಬೇಕಾದ ಕ್ರಮಗಳು ಹಾಗೂ ಶಿಲಾ ಪದರದ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಪರಿಶೀಲನೆ ನಡೆಸಿ ಅಂದಾಜು ರೂ 22ಲಕ್ಷ ಅಗತ್ಯವಿದೆ ಎಂದಿದ್ದಾರೆ.

ಒಟ್ಟಿನಲ್ಲಿ ಈ ಕುರಿತು ಹೆಚ್ಚಿನ ಅನುದಾನ ಹಾಗೂ ಕಾಮಗಾರಿ ಪ್ರಸ್ತಾವಕ್ಕೆ ಅನುಮೋದನೆ ಪಡೆಯುವ ಸಲುವಾಗಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಇಲಾಖೆ ಜತೆ ಸಂಪರ್ಕ ಸಾಧಿಸುವ ಅಗತ್ಯವಿದೆ. ಆಗ ಮಾತ್ರ ಐಸಿಹಾಸಿಕ ದೇಗುಲದ ಸಂರಕ್ಷಣೆ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.