ADVERTISEMENT

ಹಕ್ಕುಪತ್ರ ವಿತರಣೆಯಲ್ಲಿ ಭಾರಿ ಲೂಟಿ: ಆರೋಪ

​ಪ್ರಜಾವಾಣಿ ವಾರ್ತೆ
Published 6 ಮೇ 2018, 13:10 IST
Last Updated 6 ಮೇ 2018, 13:10 IST

ಹೊಸನಗರ: ಕಡುಬಡತನ ಹೊಂದಿದ್ದ ಹೊಸನಗರ ತಾಲ್ಲೂಕಿನಲ್ಲಿ ಕಾಗೋಡು ತಿಮ್ಮಪ್ಪ ಹಾಗೂ ಅವರ ಬೆಂಬಲಿಗರು ಜಂಟಿಯಾಗಿ ಹಕ್ಕುಪತ್ರ ವಿತರಣೆ ನೆಪದಲ್ಲಿ ಬಡ ಫಲಾನುಭವಿಗಳಿಂದ ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿದ್ದಾರೆ ಎಂದು ಮಾಜಿ ಶಾಸಕ ಬಿ.ಸ್ವಾಮಿ ರಾವ್ ಆರೋಪಿಸಿದರು.

ಪಟ್ಟಣದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ನಡೆಸಿದ ರೋಡ್ ಷೋನಲ್ಲಿ ನಂತರ ಅವರು ಮಾತನಾಡಿದರು.

ಫಲಾನುಭವಿಗಳಿಗೆ ಇನ್ನೂ ಹಕ್ಕುಪತ್ರ ಲಭ್ಯವಾಗಿಲ್ಲ. ಅರಣ್ಯ ನೀತಿ ಮತ್ತು ಅರಣ್ಯ ಮೊಕದ್ದಮೆಯಿಂದ ಮೊದಲೇ ಹೆದರಿದ್ದ ಬಗರ್‌ಹುಕುಂ ಸಾಗುವಳಿದಾರರು ಕಾಗೋಡು ತಿಮ್ಮಪ್ಪ ಅವರ ಮಾತನ್ನು ನಂಬಿ ಮೋಸ ಹೋಗಿದ್ದಾರೆ ಎಂದರು.

ADVERTISEMENT

ಹಕ್ಕುಪತ್ರ ವಿತರಣೆಯಲ್ಲಿ ಅಧಿಕಾರಿಗಳನ್ನು ದಾಳವಾಗಿ ಮಾಡಿಕೊಂಡ ಕಾಗೋಡು ತಿಮ್ಮಪ್ಪ ಮತ್ತವರ ಬೆಂಬಲಿಗರು ಜನರಿಂದ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟರು. ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದ ಜನರು ಲಕ್ಷ ರೂಪಾಯಿ ಸುರಿದು ಹಕ್ಕುಪತ್ರ ಪಡೆದಿದ್ದಾರೆ. ಕೆಲವರಿಂದ ₹ 2 ಲಕ್ಷದವರೆಗೂ ಹಣ ಕಸಿದುಕೊಳ್ಳಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಮಾವ ಕಾಗೋಡು ತಿಮ್ಮಪ್ಪ ಹಾಗೂ ಅಳಿಯ ಗೋಪಾಲ ಕೃಷ್ಣ ಬೇಳೂರು ಜೋಡಾಟ ಈ ಬಾರಿ ನಡೆಯುವುದಿಲ್ಲ ಎಂದು ಹೇಳಿದರು.

ರೋಡ್ ಷೋ: ಹರತಾಳು ಹಾಲಪ್ಪ ಮತ್ತು ಕಾರ್ಯಕರ್ತರು ರೋಡ್ ಷೋ ನಡೆಸಿದರು. ಪಟ್ಟಣದ ಬೀದಿ
ಬೀದಿ ಸುತ್ತಿದ ಹರತಾಳು ಹಾಲಪ್ಪ ಕಾಂಗ್ರೆಸ್ ದುರಾಡಳಿತದ ವಿರುದ್ಧ ಹರಿಹಾಯ್ದರು.

‘ಮೂರು ಕಾಸಿನ ಕೆಲಸ ಮಾಡಿಲ್ಲ’

ಸಚಿವ ಕಾಗೋಡು ತಿಮ್ಮಪ್ಪ ಅವರಿಂದ ಈಡಿಗ ಜಾತಿಗೆ ಏನು ಪ್ರಯೋಜನ ಆಗಿಲ್ಲ. ಮೂರು ಕಾಸಿನ ಕೆಲಸ ಮಾಡಿಲ್ಲ. ಈಡಿಗ ಸಮುದಾಯದ ಸೈಟ್, ಜಾಗವನ್ನು ಕಬಳಿಸಿಕೊಂಡ ಕಾಗೋಡು ತಿಮ್ಮಪ್ಪ ಅದರ ಋಣವನ್ನು ತೀರಿಸಿಲ್ಲ. ಬದಲಿಗೆ ನಾನೊಬ್ಬ ಈಡಿಗ ಜನಾಂಗದ ಮುಖಂಡ ಎಂದು ಕರೆಸಿಕೊಳ್ಳುತ್ತಿರುವುದು ನಾಚಿಕೆಗೇಡು ಸ್ವಾಮಿರಾವ್‌ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.