ADVERTISEMENT

‘ಹಲ್ಲು ಉದುರುವುದು ವಯಸ್ಸಾಗುವ ಪ್ರಕ್ರಿಯೆಯಲ್ಲ’

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 9:14 IST
Last Updated 31 ಮಾರ್ಚ್ 2018, 9:14 IST
ಸೊರಬ ತಾಲ್ಲೂಕಿನ ಹುಲೇಮರಡಿ ಗ್ರಾಮದಲ್ಲಿ ರೋಟರಿ ಕ್ಲಬ್ ಶುಕ್ರವಾರ ಹಮ್ಮಿಕೊಂಡಿದ್ದ ಹೈನುಗಾರಿಕೆ ಹಾಗೂ ಆರೋಗ್ಯ ಶಿಬಿರವನ್ನು ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಗುತ್ತಿ ಉದ್ಘಾಟಿಸಿದರು.
ಸೊರಬ ತಾಲ್ಲೂಕಿನ ಹುಲೇಮರಡಿ ಗ್ರಾಮದಲ್ಲಿ ರೋಟರಿ ಕ್ಲಬ್ ಶುಕ್ರವಾರ ಹಮ್ಮಿಕೊಂಡಿದ್ದ ಹೈನುಗಾರಿಕೆ ಹಾಗೂ ಆರೋಗ್ಯ ಶಿಬಿರವನ್ನು ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಗುತ್ತಿ ಉದ್ಘಾಟಿಸಿದರು.   

ಸೊರಬ: ಮನುಷ್ಯನಲ್ಲಿನ ದೇಹದ ಯಾವುದೇ ಭಾಗ ಸರಿಯಾಗಿರಬೇಕೆಂದರೆ ಮೊದಲು ಹಲ್ಲುಗಳನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ದಂತವೈದ್ಯ ಡಾ.ಜ್ಞಾನೇಶ್ ಸಲಹೆ ನೀಡಿದರು.

ತಾಲ್ಲೂಕಿನ ಹುಲೇಮರಡಿ ಗ್ರಾಮದಲ್ಲಿ ರೋಟರಿ ಕ್ಲಬ್ ಶುಕ್ರವಾರ ಹಮ್ಮಿಕೊಂಡಿದ್ದ ಹೈನುಗಾರಿಕೆ ಹಾಗೂ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.

ಮನುಷ್ಯನ ಹಲ್ಲು ಮತ್ತು ಬಾಯಿ ನೋಡಿ ಅನುಭವಿ ವೈದ್ಯ ಆತನ ದೇಹ ಸ್ಥಿತಿಯನ್ನು ಕುರಿತು ಹೇಳಬಹುದು. ಹಲ್ಲು ಉದುರುವುದು ವಯಸ್ಸಾಗುವ ಪ್ರಕ್ರಿಯೆ ಅಲ್ಲ. ಹಲ್ಲುಗಳನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದಾಗ ಉದುರುತ್ತವೆ. ವಸಡಿನಲ್ಲಿ ಪಾಚಿ ಕಟ್ಟಿಕೊಂಡಾಗ ಉದುರಲು ಪ್ರಾರಂಭಿಸುತ್ತವೆ, ಗ್ರಾಮೀಣ ಪ್ರದೇಶದಲ್ಲಿ ಹಲ್ಲುಗಳಿಗೆ ಜನರು ಮಹತ್ವ ನೀಡುತ್ತಿಲ್ಲ. ಇದರಿಂದ ವಯಸ್ಸಾದ ಮೇಲೆ ಅನೇಕ ಕಾಯಿಲೆಗಳು ಬರುತ್ತವೆ ಎಂದರು.

ADVERTISEMENT

ಭಾರತದಲ್ಲಿ ಶೇ 5ರಷ್ಟು ಜನ ಮಾತ್ರ ಹಲ್ಲುಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಯಿ ಮತ್ತು ಹಲ್ಲನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ಸಹಜವಾಗಿಯೇ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾಗುತ್ತದೆ. ವಿವಿಧ ಬಗೆಯ 300ಕ್ಕೂ ಅಧಿಕ ಬ್ಯಾಕ್ಟಿರಿಯಾಗಳು ಹಲ್ಲುಗಳಲ್ಲಿ ಇರುತ್ತವೆ ಎಂದರು.

ತಂಬಾಕು ಸೇವನೆಯಿಂದಾಗಿ ಕ್ಯಾನ್ಸರ್ ಬರುತ್ತದೆ. ಅಡಿಕೆ ಸೇವನೆಯಿಂದ ಯಾವ ಕಾಯಿಲೆಯೂ ಬರುವುದಿಲ್ಲ. ಸುಣ್ಣ ಕಡಿಮೆ ಮಾಡಿ ಅಡಿಕೆ ಹಾಕಿಕೊಳ್ಳವುದು ಉತ್ತಮ ಎಂದರು.

ರೋಟರಿ ಕ್ಲಬ್‌ ಅಧ್ಯಕ್ಷ ನಾಗರಾಜ್ ಗುತ್ತಿ ಮಾತನಾಡಿ, ‘ಗ್ರಾಮೀಣ ಪ್ರದೇಶದ ಅಭಿವೃದ್ಧಿ ದೃಷ್ಟಿಯಿಂದ ರೋಟರಿ ಕ್ಲಬ್ ಸ್ಥಾಪನೆಗೊಂಡ ದಿನದಂದಲೂ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿದೆ. ರೈತರು ಕೃಷಿ ಜೊತೆಗೆ ಹೈನುಗಾರಿಕೆಯನ್ನು ಉಪ ಕಸುಬಾಗಿ ಬೆಳೆಸಿಕೊಂಡರೆ ಆರ್ಥಿಕವಾಗಿ ಬಲಿಷ್ಠಗೊಳ್ಳಬಹುದು’ ಎಂದು ಹೇಳಿದರು.

ದತ್ತಾತ್ರಿ ಅವರು ಹೈನುಗಾರಿಕೆ ಬಗ್ಗೆ ಉಪನ್ಯಾಸ ನೀಡಿದರು. ಶಾಲಾ ಮಕ್ಕಳಿಗೆ ರೋಟರಿ ಕ್ಲಬ್ ವತಿಯಿಂದ ಬ್ರಶ್, ಪೇಸ್ಟ್, ಪೆನ್ನು ಹಾಗೂ ನೋಟ್ ಬುಕ್‌ ವಿತರಿಸಲಾಯಿತು.

ಶಂಕರ್ ಶೇಟ್, ಜಯಪ್ಪ ಯಲವಳ್ಳಿ, ನಿಂಗಪ್ಪ, ಗಣಪಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.