ADVERTISEMENT

ಕೃಷಿ ವಲಯ ಉಪೇಕ್ಷೆ ಸಲ್ಲದು: ರಾಘವೇಶ್ವರ ಶ್ರೀ

ರಾಜ್ಯಮಟ್ಟದ ಕೃಷಿ ಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 15:06 IST
Last Updated 12 ಏಪ್ರಿಲ್ 2019, 15:06 IST
ಹೊಸನಗರ ಸಮೀಪದ ರಾಮಚಂದ್ರಾಪುರದಲ್ಲಿ 3 ದಿನಗಳ ರಾಜ್ಯಮಟ್ಟದ ಕೃಷಿ ಮೇಳವನ್ನು ರಾಘವೇಶ್ವರ ಭಾರತೀ ಸ್ವಾಮೀಜಿ ಉದ್ಘಾಟಿಸಿದರು
ಹೊಸನಗರ ಸಮೀಪದ ರಾಮಚಂದ್ರಾಪುರದಲ್ಲಿ 3 ದಿನಗಳ ರಾಜ್ಯಮಟ್ಟದ ಕೃಷಿ ಮೇಳವನ್ನು ರಾಘವೇಶ್ವರ ಭಾರತೀ ಸ್ವಾಮೀಜಿ ಉದ್ಘಾಟಿಸಿದರು   

ಹೊಸನಗರ: ಕೃಷಿ ಪ್ರಧಾನ ದೇಶದಲ್ಲಿ ಕೃಷಿ ವಲಯ ಉಪೇಕ್ಷೆ ಸಲ್ಲದು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಸಮೀಪದ ರಾಮಚಂದ್ರಾಪುರ ಮಠದಲ್ಲಿ ಡೈಮಂಡ್ ಜೇಸಿಐ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತ ಆಶ್ರಯದಲ್ಲಿ 3 ದಿನಗಳ ರಾಜ್ಯಮಟ್ಟದ ಕೃಷಿ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ವಲಯ ಉಪೇಕ್ಷಿಸಿದರೆ ದೇಶದಲ್ಲಿ ದುರ್ಭೀಕ್ಷೆ ಆಗುತ್ತದೆ. ಕೃಷಿಕರು ಎಂದಿಗೂ ಕೃಷಿ ಮರೆತು ವ್ಯವಹಾರ ಮಾಡಕೂಡದು. ರೈತರು ಸೋಮಾರಿಗಳಾಗದೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಂತೆ ಅವರು ಸಲಹೆ ನೀಡಿದರು.

ADVERTISEMENT

ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಕೃಷಿ ವಲಯನ್ನು ಕಡೆಗಣಿಸುತ್ತಿವೆ. ಚುನಾವಣೆಯ ಸಮಯದಲ್ಲಿ ಮಾತ್ರ ಕೃಷಿಕರ ನೆನಪು ಆಗುತ್ತಿದೆ. ರೈತರನ್ನು ದಾಳಗಳಂತೆ ಬಳಸಲಾಗುತ್ತಿದೆ ಎಂದು ವಿಷಾದಿಸಿದರು.

ದುಡಿಯುವ ಕೈಗಳಿಗೆ ಕೆಲಸ ನೀಡಬೇಕೇ ವಿನಃ ಸೋಮಾರಿತನಕ್ಕೆ ದೂಡುವ ಸರ್ಕಾರಿ ಯೋಜನೆಗಳು ರೈತರ ಬದುಕು ಹಸನಗೊಳಿಸಲಾರವು ಎಂದು ಅಭಿಪ್ರಾಯಪಟ್ಟರು.

ಡೈಮಂಡ್ ಜೇಸಿಐ ಅಧ್ಯಕ್ಷ ಮೋಹನ್ ಕೋಟೆತಾರಿಕ ಅಧ್ಯಕ್ಷತೆ ವಹಿಸಿದ್ದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಶಿವರಾಯ ಪ್ರಭು, ವಲಯ ಯೋಜನಾಧಿಕಾರಿ ಸಂತೋಷ, ಕಾಮದುಘಾ ಯೋಜನೆಯ ಕಾರ್ಯದರ್ಶಿ ವೈ.ವಿ. ಕೃಷ್ಣಮೂರ್ತಿ, ಜೇಸಿಐ ವಲಯ ಅಧ್ಯಕ್ಷೆ ಸವಿತಾ ರಮೇಶ, ವಲಯ ನಿರ್ದೇಶಕ ವಿನಾಯಕ ಅರಮನೆ, ಕಾರ್ಯಕ್ರಮ ನಿರ್ದೇಶಕ ವಿಶ್ವೇಶ್ವರ ಇದ್ದರು.

ಎಲ್.ಕೆ.ಮುರಳಿ ಕಾರ್ಯಕ್ರಮ ನಿರೂಪಿಸಿದರು. ಕನಸು ಕವೀಶ ವಂದಿಸಿದರು.

ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆ: ಬೆಳಿಗ್ಗೆ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳ ಉದ್ಘಾನೆಯನ್ನು ಹವ್ಯಕ ಮಹಾಮಂಡಳ ಅಧ್ಯಕ್ಷೆ ಈಶ್ವರಿ ಬೇರ್ಕಡವು ನೆರವೇರಿಸಿದರು.

ಸಂಜೆ ಭಾರತಿ ಗುರುಕುಲಂ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಹಾಗೂ ಪ್ರಹ್ಲಾದ್ ಆಚಾರ್ಯ ಇವರಿಂದ ಶಾಡೋ ಪ್ಲೆ ಹಾಗೂ ಜಾದೂ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.