ADVERTISEMENT

ಭದ್ರಾ ನಾಲೆಗೆ ಇನ್ನೂ ನಾಲ್ಕು ದಿನ ನೀರು

​ಪ್ರಜಾವಾಣಿ ವಾರ್ತೆ
Published 20 ಮೇ 2019, 20:14 IST
Last Updated 20 ಮೇ 2019, 20:14 IST

ಶಿವಮೊಗ್ಗ: ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ಹಲವೆಡೆ ಕುಡಿಯುವ ನೀರಿನ ಅಭಾವ ಇರುವ ಕಾರಣ ಭದ್ರಾ ನಾಲೆಗಳಲ್ಲಿ ಇನ್ನೂ ನಾಲ್ಕು ದಿನ ನೀರು ಹರಿಸಲು ಸರ್ಕಾರ ಮೌಖಿಕವಾಗಿ ಸೂಚಿಸಿದೆ.

ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಜನವರಿಯಿಂದಲೇನಾಲೆಗಳಲ್ಲಿ ನೀರುಹರಿಸಲಾಗುತ್ತಿತ್ತು.ನಿರಂತರವಾಗಿ ಎಡ ಮತ್ತು ಬಲ ನಾಲೆಗಳಿಗೆ ಹರಿಸುತ್ತಿರುವ ನೀರು ಮೇ 20ರಿಂದ ಸ್ಥಗಿತಗೊಳಿಸಲು ಹಿಂದೆ ನಡೆದ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಕೆಲವು ರೈತ ಸಂಘಟನೆಗಳು ಮೇ ಅಂತ್ಯದವರೆಗೂ ನೀರು ಹರಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದವು.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲ್ಲೂಕಿನ 1,82,818 ಹೆಕ್ಟೇರ್ ಜಮೀನುಗಳಿಗೆ ಭದ್ರಾ ಜಲಾಶಯ ನೀರುಣಿಸುತ್ತದೆ. ಜೊತೆಗೆ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಹಲವು ನಗರ, ಪಟ್ಟಣ, ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳಿಗೆ ಈ ಜಲಾಶಯವೇ ಆಧಾರ.

ADVERTISEMENT

ಕೊನೆಯ ಭಾಗದಲ್ಲಿ ಇನ್ನೂ ಭತ್ತ ಸಂಪೂರ್ಣ ಕಟಾವಿಗೆ ಬಂದಿಲ್ಲ. ಅಲ್ಲದೇ, ಅಡಿಕೆ ತೋಟಗಳಿಗೆ ನೀರಿನ ಅಗತ್ಯವಿದೆ. ಕುಡಿಯುವ ನೀರಿಗೂ ಸಮಸ್ಯೆ ಇದೆ. ಹಾಗಾಗಿ, ನಾಲ್ಕು ದಿನಗಳ ನಂತರವೇ ನೀರು ನಿಲ್ಲಿಸಲು ಅಧಿಕಾರಿಗಳಿಗೆ ಸೂಚನೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆ ನೀತಿ ಸಂಹಿತೆ ಇರುವ ಕಾರಣ ಸಲಹಾ ಸಮಿತಿ ಸಭೆ ಕರೆದಿಲ್ಲ. ನಿಗದಿಯಂತೆ ಮೇ 20ರಂದು ನೀರು ನಿಲುಗಡೆ ಮಾಡಬೇಕಿತ್ತು. ಜಲಸಂಪನ್ಮೂಲ ಸಚಿವಾಲಯದಿಂದ ಆದೇಶ ಪತ್ರ ಬಂದಿಲ್ಲ. ಬಂದ ತಕ್ಷಣ ನೀರು ನಿಲುಗಡೆ ಮಾಡುವುದಾಗಿಎಂಜಿನಿಯರ್‌ಗಳು ತಿಳಿಸಿದ್ದಾರೆ ಎಂದು ರೈತ ಮುಖಂಡ ಎಚ್‌.ಆರ್.ಬಸವರಾಜಪ್ಪ ಮಾಹಿತಿ ನೀಡಿದರು.

ಗರಿಷ್ಠಮಟ್ಟ ತಲುಪಿದರೆ ಜಲಾಶಯದಲ್ಲಿ 71.53 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತದೆ. ಅದರಲ್ಲಿ 13.832 ಟಿಎಂಸಿ ಅಡಿ ಡೆಡ್‌ ಸ್ಟೋರೇಜ್. ಪ್ರಸ್ತುತ ಜಲಾಶಯದಲ್ಲಿ 126 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.