ADVERTISEMENT

ಶಬರಿಮಲೆ ಗೊಂದಲಕ್ಕೆ ಯಡಿಯೂರಪ್ಪ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 16:42 IST
Last Updated 3 ಜನವರಿ 2019, 16:42 IST
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ   

ಶಿವಮೊಗ್ಗ: ಶಬರಿಮಲೆ ಗೊಂದಲಕ್ಕೆ ಕೇರಳ ಸರ್ಕಾರವೇ ಹೊಣೆ. ಆ ಭಾಗದ ಮಹಿಳೆಯರ ವಿರೋಧವಿದ್ದರೂ, ಬಲವಂತದ ಪ್ರವೇಶ ನಡೆದಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ದೂರಿದರು.

ಶಿವಮೊಗ್ಗದಲ್ಲಿ ಗುರುವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣಕ್ಕೆ ವಿರೋಧವಿದ್ದರೂ ಉಪ ಮುಖ್ಯಮಂತ್ರಿ ಮತ್ತೆ ಪ್ರಸ್ತಾವ ಮಾಡಿದ್ದಾರೆ. ಜನರಿಗೆ ಬೇಡವಾದ ಯೋಜನೆ ಏಕೆ ಕೈಗೆತ್ತಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.

ADVERTISEMENT

ರೈತರ ಸಾಲ ಮನ್ನಾ ವಿಷಯ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದ 150 ತಾಲ್ಲೂಕುಗಳು ಬರಪೀಡಿತವಾಗಿವೆ. ಅಧಿಕಾರಿಗಳು, ಸರ್ಕಾರ ಜನರ ಸಂಕಷ್ಟ ಬಗೆಹರಿಸಲು ಯಾವುದೇ ಕ್ರಮಕೈಗೊಂಡಿಲ್ಲ. ಅಧಿವೇಶನದಲ್ಲಿ ಬಿಜೆಪಿ ಪ್ರಶ್ನೆ ಮಾಡಿದ ಬಳಿಕ ಬರ ಪೀಡಿತ ತಾಲ್ಲೂಕುಗಳಿಗೆ ತಲಾ ₹50 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದರು.

ಬಿಜೆಪಿ ಬರ ಅಧ್ಯಯನ ಸಮಿತಿ ರಾಜ್ಯದ ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದೆ. ಜನರು ಸಂಕಷ್ಟದಲ್ಲಿ ನರಳುತ್ತಿರುವಾಗ ಮುಖ್ಯಮಂತ್ರಿ ಕುಟುಂಬ ಸಮೇತ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಪ್ರತಿಕ್ವಿಂಟಲ್ ಭತ್ತಕ್ಕೆ ₹1,700 ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ ರಾಜ್ಯ ಆ ದರದಲ್ಲಿ ಖರೀದಿ ಮಾಡಿಲ್ಲ ಎಂದು ಆರೋಪಿಸಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಕೈಗೊಳ್ಳುವಂತೆ ಹಿರಿಯ ಮುಖಂಡ ಎಸ್‌.ಎಂ. ಕೃಷ್ಣ ಅವರನ್ನು ಕೋರಿದ್ದೇನೆ. ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.

ರಾಮ ಹಾಗೂ ಸೀತೆ ವಿಚಾರವಾಗಿ ಸಾಹಿತಿ ಭಗವಾನ್ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.