ಸಾಗರ: ತಾಲ್ಲೂಕಿನ ಕರೂರು ಹೋಬಳಿಯ ಶರಾವತಿ ಹಿನ್ನೀರು ಪ್ರದೇಶವಾದ ನಿಲ್ದೋಡಿ ಬಳಿ ಮೀನು ಹಿಡಿಯಲು ಹೋದವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ನಡೆಸಿರುವ ಘಟನೆಯನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಚ್.ಹಾಲಪ್ಪ ಹರತಾಳು ತೀವ್ರವಾಗಿ ಖಂಡಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಿರ್ವಾಸೆ ಗ್ರಾಮದ ಮಂಜುನಾಥ್ ಅವರ ಆರೋಗ್ಯ ವಿಚಾರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೀನು ಹಿಡಿಯಲು ಹೋದವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ನಡೆಸಿರುವುದು ಖಂಡನೀಯ. ಮಂಜುನಾಥ್ ಅವರ ಪಕ್ಕೆಲುಬು ಮುರಿದಿರುವ ಜೊತೆಗೆ ಶ್ವಾಸಕೋಶಕ್ಕೆ ತೊಂದರೆಯಾಗಿದ್ದು, ಉಸಿರಾಟಕ್ಕೂ ಕಷ್ಟಪಡುವಂತಾಗಿದೆ. ಹಲ್ಲೆ ಮಾಡಿದವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹೆದರಿ ಮಂಜುನಾಥ್ ಅವರು ನ್ಯಾಯಾಧೀಶರ ಎದುರು ತಮ್ಮನ್ನು ಹಾಜರುಪಡಿಸಿದಾಗ ಅವರ ವಿರುದ್ಧ ಯಾವುದೇ ದೂರು ಹೇಳಿಲ್ಲ. ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯವರ ದೌರ್ಜನ್ಯ ಮಿತಿಮೀರುತ್ತಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ದೂರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಬಿಜೆಪಿ ಮುಖಂಡ ಟಿ.ಡಿ.ಮೇಘರಾಜ್, ಪ್ರಮುಖರಾದ ಜಿ.ಟಿ.ಸತ್ಯನಾರಾಯಣ, ಕೆ.ಹೊಳಿಯಪ್ಪ, ಹರೀಶ್ ಗಂಟೆ, ಗಣೇಶ್ ಜಾಕಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.