ಶಿವಮೊಗ್ಗ: ರಾಜಕಾರಣ ಜೀವಪರವಾಗಬೇಕಿದೆ. ಅದರಲ್ಲೂ ಸಾವಯವ ಪದ್ಧತಿ ಅಳವಡಿಕೆಯಾಗಬೇಕಿದೆ. ಆ ನಿಟ್ಟಿನಲ್ಲಿ ಫೆಬ್ರುವರಿ 11, 12, 13ರಂದು ರಾಣೆಬೆನ್ನೂರು ತಾಲ್ಲೂಕು ಮುದೇನೂರು ಗ್ರಾಮದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಸಂಯುಕ್ತ ಜನತಾದಳದ ಮುಖಂಡ ಮಹಿಮ ಪಟೇಲ್ ತಿಳಿಸಿದರು.
‘ಎರಡು ದಿನ ಕಾಲ ಸಂವಾದ, ನಾಟಕ, ಸಿನಿಮಾ ಪ್ರದರ್ಶನ, ಕೃಷಿ– ಶಿಕ್ಷಣ ತಜ್ಞರು ಪಾಲ್ಗೊಳ್ಳಲಿದ್ದು, ಅಧಿಕಾರ ವಿಕೇಂದ್ರೀಕರಣದ ಕುರಿತು ಆಸಕ್ತರ ಜೊತೆ ಮಾತುಕತೆ ನಡೆಸಲಿದ್ದಾರೆ’ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಫೆ. 13ರಂದು ರೈತ ಸಂಘದ ಸಂಸ್ಥಾಪಕ ಪ್ರೊ.ನಂಜುಂಡಸ್ವಾಮಿ ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಗುವುದು. ರಾಜ್ಯ ಮತ್ತು ದೇಶದಲ್ಲಿ ಹೊಸ ಚಳುವಳಿ ಆರಂಭವಾಗವೇಕು. ರಾಜಕಾರಣ ಮತ್ತು ಜೀವನ ಸಾವಯವದಿಂದ ಕೂಡಿರಬೇಕು ಎಂಬ ಧ್ಯೇಯದೊಂದಿಗೆ ಕೆಲಸ ಮಾಡಲಾಗುವುದು ಎಂದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ ಶಿಂಧೆ, ಪ್ರಮುಖರಾದ ಶಶಿಕುಮಾರ್ ಗೌಡ, ನವೀನ್ ದಳವಾಯಿ, ರವಿ, ಕಲ್ಪನಾ ಗೌಡ, ಕಲಾವತಿ, ಶಿವರಾಮ್, ರಮೇಶ್ ಗೌಡ ಸುದ್ದಿಗೋಷ್ಠಿಯಲ್ಲಿದ್ದರು.
ಉಚಿತ ಕೊಡುಗೆಗಳ ಚಟ: ಮಹಿಮ ಬೇಸರ
ರಾಜಕೀಯ ಪಕ್ಷಗಳಿಗೆ ಉಚಿತ ಕೊಡುಗೆಗಳ ಘೋಷಣೆ ಮಾಡುವುದು ಚಟವಾಗಿ ಪರಿಣಮಿಸಿದೆ ಎಂದು ಮಹಿಮ ಪಟೇಲ್ ಅಭಿಪ್ರಾಯಪಟ್ಟರು.
200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ₹ 2,000 ಕೊಡುವುದು, ರೈತರಿಗೆ ₹6,000 ಕೊಡುವುದು ಎಲ್ಲವೂ ಅವರ ಹಿತಕ್ಕೆ ಪೂರಕವಾಗಿಲ್ಲ. ಯಾವುದನ್ನೂ ಉಚಿತವಾಗಿ ಕೊಡಬಾರದು. ಜನರ ಜೀವನ ಸರ್ಕಾರದ ನೆರವಿನಿಂದ ನಡೆಯುವುದು ಸೂಕ್ತವಲ್ಲ. ನಾಗರಿಕರನ್ನು ರಾಜಕೀಯ ಪಕ್ಷಗಳು ಭಿಕ್ಷುಕರಂತೆ ನೋಡುತ್ತಿವೆ. ಭಿಕ್ಷುಕರನ್ನೂ ಶಕ್ತಿವಂತರನ್ನಾಗಿ ಮಾಡುವ ಕೆಲಸ ಆಗಬೇಕಾಗಿದೆ ಎಂದರು.
224 ಕ್ಷೇತ್ರಗಳಿಂದಲೂ ಅರ್ಜಿ ಆಹ್ವಾನ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ರಾಜ್ಯದ ಎಲ್ಲ 224 ಕ್ಷೇತ್ರಗಳಿಗೂ ಅರ್ಜಿ ಆಹ್ವಾನಿಸಿದೆ. ಹಾಗಂತ 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಇರಾದೆ ಇಲ್ಲ. ಅಭ್ಯರ್ಥಿಗಳ ಹಿನ್ನೆಲೆ, ಆಸಕ್ತಿ ಎಲ್ಲವನ್ನೂ ಗಮನಿಸಿ ಟಿಕೆಟ್ ನೀಡಲಾಗುವುದು. ಕನಿಷ್ಠ 140 ಸ್ಥಾನಗಳಲ್ಲಿಯಾದರೂ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂದು ಮಹಿಮ ಪಟೇಲ್ ತಿಳಿಸಿದರು.
‘ಎಲ್ಲರೂ ಒಂದಾಗಿ ಚುನಾವಣೆ ಎದುರಿಸುವ ಸಂಬಂಧ ರೈತ ಸಂಘದ ಮುಖಂಡರು, ಆಮ್ ಆದ್ಮಿ ಪಾರ್ಟಿ, ಕೆಆರ್ಎಸ್ ಪಕ್ಷ ಸೇರಿದಂತೆ ಬೇರೆ ಬೇರೆ ಪಕ್ಷಗಳ ಮುಖಂಡರ ಜೊತೆಯೂ ಮಾತುಕತೆ ನಡೆಸಲಾಗುತ್ತಿದೆ. ಇನ್ನೂ ಒಂದಾಗಲು ಕಾಲ ಪಕ್ವವಾಗಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.