ಆನವಟ್ಟಿ: ಇಲ್ಲಿನ ಮೇಸ್ಕಾಂ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಬೆರಳೆಣಿಕೆ ಜನರು ಭಾಗವಹಿಸಿದ್ದು, ಶಿವಮೊಗ್ಗ ಅಧೀಕ್ಷಕ ಎಂಜಿನಿಯರ್ ಶಶಿಧರ್ ಅವರು ಜನರೇ ಇಲ್ಲದಿರುವುದನ್ನು ಕಂಡು ಮುಜುಗರಕ್ಕೆ ಒಳಗಾದ ಪ್ರಸಂಗ ನಡೆಯಿತು.
ಮೆಸ್ಕಾಂ ಉಪವಿಭಾಗದ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡದಿರುವುದು, ಪ್ರಚಾರ ಮಾಡದಿರುವುದು ಜೊತೆಗೆ ಮಾಧ್ಯಮದವರಿಗೊ ಮಾಹಿತಿ ನೀಡದಿರುವುದನ್ನು ತಿಳಿದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ಜನರಿಗೆ ನಿಮ್ಮ ತಪ್ಪುಗಳ ಬಗ್ಗೆ ಗೊತ್ತಾಗಬಾರದು, ನಿಮ್ಮ ಬಗ್ಗೆ ದೂರುಗಳು ಬರಬಾರದು ಎಂದು ಸಾವರ್ಜನಿಕರಿಗೆ ಸಭೆಯ ಮಾಹಿತಿ ನೀಡಿಲ್ಲವೇ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ನಂತರ ಸಭೆಯಲ್ಲಿ ಹಾಜರಿದ್ದ ಜನರ ಅಭಿಪ್ರಾಯ ಪಡೆದ ಶಶಿಧರ್, ‘ ರಿಪೇರಿ ಕೆಲಸಗಳನ್ನು ಭಾನುವಾರ ಮಾಡಿಕೊಳ್ಳಿ. ಪದೇ ಪದೇ ಕರೆಂಟ್ ತೆಗೆಯಬೇಡಿ. ನಿಗದಿತ ಸಮಯದಲ್ಲೇ ಎಲ್ಸಿ ಮಾಡಿಕೊಳ್ಳಿ, ವಿದ್ಯುತ್ ಸ್ಥಗಿತ ಮಾಡುವ ಮೊದಲು ಪತ್ರಿಕಾ ಮಾಧ್ಯಮದವರಿಗೆ ತಿಳಿಸಿ. ಇದರಿಂದ ಜನರಿಗೆ ಮಾಹಿತಿ ಲಭಿಸುತ್ತದೆ’ ಎಂದು ಸಲಹೆ ನೀಡಿದರು.
ಲೈನ್ ಕ್ಲಿಯರ್ (ಎಲ್ಸಿ) ಮಾಡುವ ಸಲುವಾಗಿ ಪದೇ ಪದೇ ಕರೆಂಟ್ ತೆಗೆಯಲಾಗುತ್ತದೆ. ಇದರಿಂದ ಭತ್ತದ ಮಿಲ್ ಸೇರಿ ವಿದ್ಯುತ್ ಅವಲಂಬಿತ ಗುಡಿ ಕೈಗಾರಿಕೆಗಳಿಗೆ ತೊಂದರೆ ಉಂಟಾಗುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಬೆಲವಂತನಕೊಪ್ಪ ಗ್ರಾಮದ ದೇವರಾಜ ಗೊಗ್ಗನಾಳ್ ಒತ್ತಾಯಿಸಿದರು.
‘ಅನಿಯಮಿತವಾಗಿ ಕರೆಂಟ್ ತೆಗೆಯುವುದರಿಂದ ಮನೆಯಲ್ಲಿರುವ ಗೃಹ ಉಪಯೋಗಿ ವಿದ್ಯುತ್ ಉಪಕರಣಗಳು ಹಾಳಾಗುತ್ತವೆ’ ಎಂದು ಸ್ಥಳೀಯ ನಿವಾಸಿ ಶ್ರೀಧರ್ ಆಚಾರ್ ದೂರಿದರು.
ಬೆಳಕು ಯೋಜನೆ ಅಡಿ ಅರ್ಜಿ ಹಾಕಿ ನಾಲ್ಕು ತಿಂಗಳು ಕಳೆದರೂ ಫಲಾನುಭವಿಗಳಿಗೆ ಮೀಟರ್ ನೀಡಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉಪವಿಭಾಗದ ಎಇಇ ಪ್ರದೀಪ್, ‘ಈಗಾಗಲೇ 200ಕ್ಕೂ ಹೆಚ್ಚು ಫಲಾನುವಿಗಳಿಗೆ ಮೀಟರ್ ಹಾಕಿದ್ದೇವೆ. 160 ಜನರಿಗೆ ಮಾತ್ರ ಮೀಟರ್ ನೀಡುವುದು ಬಾಕಿ ಇದೆ’ ಎಂದು ಹಾರಿಕೆ ಉತ್ತರ ನೀಡಿದರು.
ಸುದ್ದಿಗಾರರು ದಾಖಲೆ ಕೇಳಿದಕ್ಕೆ ಸಭೆಯಲ್ಲಿ ಕೊಡುವುದಾಗಿ ಹೇಳಿ ನಂತರ ಕೊಡದೆ ಕಾಯುವಂತೆ ಮಾಡಿದರು. ವಾಟ್ಸ್ಆ್ಯಪ್ ಮಾಡುವುದಾಗಿ ಹೇಳಿ ಕೊನೆಗೆ ಮಾಡಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.