ಸಾಗರ: ಸಮಾಜ ಮುಖ್ಯವೇ ವಿನಾ ಪಕ್ಷವಲ್ಲ. ಸಮಾಜ ಸದೃಢವಾಗಿದ್ದರೆ ಎಲ್ಲ ಶಕ್ತಿಗಳು ತಾನಾಗಿಯೇ ಕ್ರೋಡೀಕರಣವಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಎಚ್.ಎಂ. ಚಂದ್ರಶೇಖರಪ್ಪ ತಿಳಿಸಿದರು.
ಇಲ್ಲಿನ ವೀರಶೈವ ವಿದ್ಯಾರ್ಥಿನಿಲಯದ ಆವರಣದಲ್ಲಿ ಗುರುವಾರ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
‘ಸಮಾಜ ಇದ್ದರೆ ಮಾತ್ರ ನಾನು ಎನ್ನುವ ಮನೋಭಾವ ಜನಾಂಗದವರಲ್ಲಿ ಬೆಳೆಯಬೇಕು.ಪ್ರಸ್ತುತ ರಾಜ್ಯದಲ್ಲಿ ರಾಜಕೀಯ ಸೇರಿ ಇತರೆ ಪ್ರಾತಿನಿಧ್ಯಕ್ಕಾಗಿ ಇತರೆ ಜನಾಂಗದವರು ಪೈಪೋಟಿಗೆ ಇಳಿದಿದ್ದಾರೆ. ನಾವು ಸಮಾಜವನ್ನು ಇನ್ನಷ್ಟು ಸಂಘಟಿಸುವ ಮೂಲಕ ಸದೃಢವಾಗಿ ಬೆಳೆಸಬೇಕಿದೆ. ಸಮಾಜದ ವಿಷಯ ಬಂದಾಗ ಪಕ್ಷವನ್ನು ಮರೆಯಬೇಕು. ಆಗ ಮಾತ್ರ ಸಂಘಟನೆ ಬಲಪಡಿಸಿಕೊಳ್ಳಲು ಸಾಧ್ಯವಿದೆ’ ಎಂದು ತಿಳಿಸಿದರು.
ಮಹಾಸಭಾದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಬಿ.ವೈ. ಅರುಣಾದೇವಿ ಮಾತನಾಡಿ, ‘ಪ್ರತಿಯೊಬ್ಬರೂ ಸಮಾಜದ ಶಕ್ತಿ ಇದ್ದಂತೆ. ಅವರನ್ನು ಸಂಘಟಿಸುವ ಕೆಲಸ ಮಹಾಸಭಾ ಮಾಡುತ್ತಿದೆ. ವೀರಶೈವ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾ
ವಂತರು ಶಿಕ್ಷಣದಿಂದ ವಂಚಿತರಾಗಬಾರದು. ಅಂತಹವರನ್ನು ಗುರುತಿಸಿ ಶಿಕ್ಷಣ ನೀಡಬೇಕು. ಜನಶಿಕ್ಷಣ ಸಂಸ್ಥೆ ಮೂಲಕ ವೀರಶೈವ ಸಮಾಜದವರಿಗೆ ಸ್ವಯಂ ಉದ್ಯೋಗಕ್ಕೆ ತರಬೇತಿಯನ್ನು ನೀಡಲು ಸಹಕಾರ ನೀಡುತ್ತೇನೆ’ ಎಂದರು.
ಮಹಾಸಭಾದ ತಾಲ್ಲೂಕು ಶಾಖೆ ಅಧ್ಯಕ್ಷ ಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ಮಹಾಸಭಾದ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಸಿ. ಗಂಗಾಧರ ಗೌಡ, ಪ್ರಮುಖರಾದ ಜಗದೀಶ್ ಒಡೆಯರ್, ಬಿ.ಎ. ಇಂದೂಧರ ಬೇಸೂರು, ಜ್ಯೋತಿ ಆನಂದ್ ಪಡವಗೋಡು, ಚಂದ್ರಶೇಖರ್ ಇದ್ದರು.
ಉಮಾದೇವಿ ಪ್ರಾರ್ಥಿಸಿದರು. ವೀರೇಶ್ ಎಸ್. ಸ್ವಾಗತಿಸಿದರು. ದೇವರಾಜ್ ಕೆರೋಡಿ ವಂದಿಸಿದರು. ರೇಷ್ಮಾ ಉಮೇಶ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.