ADVERTISEMENT

ಉಗ್ರರ ವಿರುದ್ಧ ಕ್ರಮ ಕೈಗೊಳ್ಳದ ಯುಪಿಎ- ನಿರ್ಮಲಾ ಸೀತಾರಾಮನ್

ಶಿವಮೊಗ್ಗ ಬಿಜೆಪಿ ಮಹಿಳಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 17:39 IST
Last Updated 15 ಏಪ್ರಿಲ್ 2019, 17:39 IST
ನಿರ್ಮಲಾ
ನಿರ್ಮಲಾ   

ಶಿವಮೊಗ್ಗ:ಮುಂಬೈ ದಾಳಿ (2008) ನಂತರ ಅಂದಿನ ಯುಪಿಎ ಸರ್ಕಾರ ಉಗ್ರರ ವಿರುದ್ಧ ದಿಟ್ಟ ಕ್ರಮ ಕೈಗೊಂಡಿದ್ದರೆ ಉರಿ, ಪುಲ್ವಾಮಾದಂತಹ ಘಟನೆಗಳು ಮರುಕಳಿಸುತ್ತಿರಲಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ದೂರಿದರು.

ಬಿಜೆಪಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಉರಿ ದಾಳಿಯ ನಂತರ ಗಡಿರೇಖೆ ಸಮೀಪ ಇದ್ದ ಉಗ್ರರ ಅಡಗುದಾಣಗಳ ಮೇಲೆ ನಿರ್ದಿಷ್ಟ ದಾಳಿ ನಡೆಸಿ ಅಲ್ಲಿನ ತರಬೇತಿ ಕೇಂದ್ರಗಳನ್ನು ನಾಶ ಮಾಡಲಾಯಿತು. ಪುಲ್ವಾಮಾ ಘಟನೆಯ ನಂತರ ಪಾಕ್‌ ಗಡಿಯ ಒಳಗೆ ಹೋಗಿ ಬಾಲಕೋಟ್‌ನಲ್ಲಿದ್ದ ಶಿಬಿರಗಳನ್ನು ಧ್ವಂಸ ಮಾಡಲಾಯಿತು. ಅಂದು ಕಠಿಣ ನಿರ್ಧಾರ ತೆಗೆದುಕೊಳ್ಳದ ಕಾಂಗ್ರೆಸ್ ಮುಖಂಡರು ಈಗ ಸೇನಾ ವಿಷಯವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಆರೋಪ ಮಾಡುತ್ತಿದ್ದಾರೆಎಂದು ದೂರಿದರು.

ADVERTISEMENT

ಕೇಂದ್ರದ ಯೋಜನೆಗಳಿಗೆ ಅಡ್ಡಗಾಲು: ಸೈನಿಕರಿಗೆ ನೀಡುವಷ್ಟೇ ಗೌರವವನ್ನು ಮೋದಿ ದೇಶದ ರೈತರಿಗೂ ನೀಡುತ್ತಿದ್ದಾರೆ. ರೈತರಿಗೆ ಆರ್ಥಿಕ ನೆರವು ನೀಡಲು ಪ್ರಧಾನ ಮಂತ್ರಿ ರೈತ ಸಮ್ಮಾನ್ ಯೋಜನೆ ಜಾರಿಗೆ ತಂದಿದ್ದಾರೆ. ಮೊದಲ ಕಂತಿನಲ್ಲಿ 3 ಕೋಟಿ ರೈತರ ಖಾತೆಗಳಿಗೆ ತಲಾ ₹ 2 ಸಾವಿರ ಹಣ ಜಮೆ ಮಾಡಲಾಗಿದೆ. ಆದರೆ, ರಾಜ್ಯ ಸರ್ಕಾರದ ಅಸಹಕಾರದ ಪರಿಣಾಮ ಇಲ್ಲಿನ 17 ರೈತರಿಗೆ ಮಾತ್ರ ಯೋಜನೆಯ ಫಲ ದೊರಕಿದೆ. ಕೇಂದ್ರದ ಯೋಜನೆಗಳಿಗೆ ರಾಜ್ಯ ಅಡ್ಡಗಾಲು ಹಾಕುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.