ಸಾಗರ: ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆ ಎಂಬ ತತ್ವವನ್ನು ಪಾಲಿಸಿದ ವನ್ನೀಯ ಮಹಾರಾಜ ಸ್ವಾಮೀಜಿ ಆದರ್ಶ ಅನುಕರಣೀಯವಾಗಿದೆ ಎಂದು ವನ್ನೀಯಕುಲ ಕ್ಷತ್ರೀಯ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಆರ್.ಶ್ರೀನಿವಾಸ್ ಹೇಳಿದರು.
ಇಲ್ಲಿನ ಜೆ.ಪಿ.ನಗರ ಬಡಾವಣೆಯಲ್ಲಿ ವನ್ನೀಯ ಕುಲ ಕ್ಷತ್ರೀಯ ಸಮಾಜದ ವತಿಯಿಂದ ಶುಕ್ರವಾರ ನಡೆದ ವನ್ನೀಯ ಮಹಾರಾಜ ಸ್ವಾಮೀಜಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವನ್ನೀಯಕುಲ ಕ್ಷತ್ರೀಯ ಸಮಾಜದವರು ಇದ್ದಾರೆ. ಅವರನ್ನು ತಿಗಳರ ಸಮಾಜದಡಿ ಗುರುತಿಸಿರುವ ಕ್ರಮ ಅವೈಜ್ಞಾನಿಕವಾಗಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ ತೀರಾ ಹಿಂದುಳಿದಿರುವ ಈ ಸಮುದಾಯವನ್ನು ಹಿಂದುಳಿದ ವರ್ಗ 2 (ಎ)ಗೆ ಸೇರಿಸಬೇಕು ಎಂದು ಅವರು ಒತ್ತಾಯಿಸಿದರು.
ವನ್ನೀಯಕುಲ ಕ್ಷತ್ರೀಯ ಸಮಾಜವನ್ನು ತಿಗಳರ ಸಮುದಾಯದಡಿ ಸೇರಿಸಿರುವುದರಿಂದ ಪ್ರಸ್ತುತ ಹಿಂದುಳಿದ ವರ್ಗ 3 (ಎ)ರಡಿ ಗುರುತಿಸಲಾಗುತ್ತಿದೆ. ಇದರಿಂದ ಶ್ರಮಿಕ ವರ್ಗಕ್ಕೆ ಸೇರಿರುವ ಈ ಸಮುದಾಯಕ್ಕೆ ತೀವ್ರ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರ ಇದನ್ನು ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರಮುಖರಾದ ಆನಂದ್, ವಿನಾಯಕ್, ಎಚ್.ಶೇಟ್, ಅರುಣ್, ಅಜಿತ್, ಉಷಾ, ಶಾಂತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.