ಸಾಗರ: ಇಲ್ಲಿನ ಜೀವನ್ಮುಖಿ, ಚರಕ ಸಂಸ್ಥೆಯು ಆಗಸ್ಟ್ 2ರಂದು ಬೆಳಿಗ್ಗೆ 11 ರಿಂದ ರಾತ್ರಿ 8ರ ವರೆಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ಆಹಾರ, ಕರಕುಶಲ ಮೇಳಗಳನ್ನೊಳಗೊಂಡ ‘ಅವ್ವ’ ಮಹಿಳಾ ಸಂತೆಯನ್ನು ಆಯೋಜಿಸಿದೆ.
ಕಳೆದ ಮೂರು ವರ್ಷಗಳಿಂದ ಮಹಿಳಾ ಸಂತೆ ಯಶಸ್ವಿಯಾಗಿ ನಡೆಯುತ್ತಿದ್ದು ಇದು 16 ನೇ ಸಂತೆಯಾಗಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಉದ್ಯಮ ನಡೆಸುತ್ತಿರುವ ಮಹಿಳೆಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸಂತೆಯನ್ನು ಸಂಘಟಿಸಲಾಗುತ್ತಿದೆ ಎಂದು ಜೀವನ್ಮುಖಿ ಸಂಸ್ಥೆಯ ಎಂ.ವಿ.ಪ್ರತಿಭಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಿಳಾ ಸಂತೆಯಲ್ಲಿ ಚರಕ ಸಂಸ್ಥೆಯ ಕೈಮಗ್ಗ ಹಾಗೂ ನೈಸರ್ಗಿಕ ಬಣ್ಣಗಾರಿಕೆಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವಿದೆ. ರಾಜ್ಯದ ವಿವಿಧ ಭಾಗಗಳಿಂದ ಮಹಿಳಾ ಕರಕುಶಲಕರ್ಮಿಗಳು ಸಿದ್ಧಪಡಿಸಿರುವ ವಸ್ತುಗಳ ಪ್ರದರ್ಶನ ಕೂಡ ಆಯೋಜಿಸಲಾಗಿದೆ. 50 ಕ್ಕೂ ಹೆಚ್ಚು ಆಹಾರ ಪದಾರ್ಥಗಳ, ಸಾವಯವ ಮಾದರಿಯಲ್ಲಿ ಬೆಳೆದ ನವಣೆ, ಜೋಳ ಇತರೆ ಧಾನ್ಯಗಳ ಪ್ರದರ್ಶನ ಕೂಡ ಇರುತ್ತದೆ ಎಂದು ಮಾಹಿತಿ ನೀಡಿದರು.
ಜೀವನ್ಮುಖಿ ಸಂಸ್ಥೆಯ ಮಂಜುಳಾ ಎ.ಎನ್. ಅಮೃತಾ ಕಾರ್ಗಲ್, ರೋಹಿಣಿ ಎಚ್.ಎಸ್. ಸೌಮ್ಯ ಎಸ್. ಮಮತಾ ಜೈನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.