ಶಿರಾ: ‘ತಾಲ್ಲೂಕಿನಲ್ಲಿ ಜಾನುವಾರುಗಳು ಹೆಚ್ಚಾಗಿರುವ ಗ್ರಾಮಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಗೋಮಾಳ ಭೂಮಿ ಮೀಸಲಿಡಲಾಗುವುದು. ಉಳಿಕೆ ಜಾಗವನ್ನು ನಿವೇಶನವಾಗಿ ಪರಿವರ್ತಿಸಿ ಗ್ರಾಮದ ಫಲಾನುಭವಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಮತ್ತಷ್ಟು ಭೂಮಿ ಉಳಿದರೆ ಇತರ ಗ್ರಾಮದ ನಿವೇಶನ ರಹಿತರಿಗೆ ಹಂಚಿಕೆ ಮಾಡಲಾಗುವುದು’ ಎಂದು ಮಧುಗಿರಿ ಉಪವಿಭಾಗಾಧಿಕಾರಿ ವೆಂಕಟೇಶಯ್ಯ ಹೇಳಿದರು.
ತಾಲ್ಲೂಕಿನ ಮೇಲ್ಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದ್ದರಂಗನಹಳ್ಳಿ (ಉಗಣೆಕಟ್ಟೆ) ಗ್ರಾಮದಲ್ಲಿ ಗೋಮಾಳವನ್ನು ನಿವೇಶನವಾಗಿ ಪರಿವರ್ತಿಸದಂತೆ ಗ್ರಾಮಸ್ಥರ ಹಾಗೂ ರೈತ ಸಂಘ ಮನವಿ ಮಾಡಿದ ಮೇರೆಗೆ ಶನಿವಾರ ಸ್ಥಳ ಪರಿಶೀಲಿಸಿ ಮಾತನಾಡಿದರು.
ಮೆಲ್ಕುಂಟೆ ಸರ್ವೆ ನಂ. 161 ರಲ್ಲಿ 11.20 ಎಕರೆ ಸರ್ಕಾರಿ ಸೇಂದಿವನ ಭೂಮಿ ಇದೆ. ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದೇವೆ. ಭೂಮಿ ಮಂಜೂರು ಮಾಡಿಕೊಡುವಂತೆ ರೈತರು ಕೋರಿದ್ದರು. ಈ ಸ್ಥಳ ಪರಿಶೀಲಿಸಿದ ಅವರು ಜಮೀನು ಮಂಜೂರು ಮಾಡಬಾರದು ಎಂದು ಕಂದಾಯ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಸರ್ವೆ ನಂ. 206 ರಲ್ಲಿ 27 ಎಕರೆ ಗೋಮಾಳ ಇದೆ. ಈಗಾಗಲೇ ಕುರಿ ರೊಪ್ಪ ಹಾಗೂ ಗುಡಿಸಲು ವಾಸಿಗಳನ್ನು ಒಕ್ಕಲೆಬ್ಬಿಸದೆ ಅವರಿಗೆ ನಿವೇಶನ ನೀಡಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಗುರ್ತಿಸಿ ನಿವೇಶನ ನೀಡಬೇಕು ಎಂದು ಸೂಚಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಮಾತನಾಡಿ, ‘ಕುರಿ ಸಾಕಾಣಿಕೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ತಾಲ್ಲೂಕು ಪಡೆದಿದೆ. ಗೋಮಾಳವನ್ನು ಜಾನುವಾರುಗಳಿಗೆ ಮೀಸಲಿಡಬೇಕು. ಇತರೆಡೆ ಭೂಮಿ ಖರೀದಿಸಿ ನಿವೇಶನ ನೀಡಬೇಕು’ ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವಮೂರ್ತಿ, ಕಂದಾಯ ತನಿಖಾಧಿಕಾರಿ ಮಂಜುನಾಥ್, ಪಿಡಿಒ ವೆಂಕಟೇಶ್, ಗ್ರಾಮ ಲೆಕ್ಕಾಧಿಕಾರಿ ನರೇಂದ್ರ, ಕೆ.ಎಂ.ರಂಗನಾಥಪ್ಪ, ಶಿವಲಿಂಗಯ್ಯ, ನಾಗರಾಜು, ಎಂ.ಬಿ.ರಂಗನಾಥ್, ಚಂದ್ರಣ್ಣ, ಶಿವಣ್ಣ, ತಿಮ್ಮಣ್ಣ, ಪ್ರಕಾಶ್, ರಂಗನಾಥ್, ರವಿ, ಕೃಷ್ಣಪ್ಪ, ಎಂ.ಬಿ.ಕಾಂತರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.