ADVERTISEMENT

ಎಣಿಕೆ ಕೇಂದ್ರದಲ್ಲಿ ಮತಯಂತ್ರ ಭದ್ರ

​ಪ್ರಜಾವಾಣಿ ವಾರ್ತೆ
Published 14 ಮೇ 2018, 8:51 IST
Last Updated 14 ಮೇ 2018, 8:51 IST

ತುಮಕೂರು: ಮತಗಟ್ಟೆಗಳಿಂದ ಮತಯಂತ್ರ ಮತ್ತು ಮತಖಾತ್ರಿ ಯಂತ್ರಗಳನ್ನು ಮತ ಎಣಿಕೆ ಕೇಂದ್ರಕ್ಕೆ ಭಾನುವಾರ ಬೆಳಿಗ್ಗೆ 11 ಗಂಟೆಯವರೆಗೂ ಸ್ವೀಕರಿಸುವ ಪ್ರಕ್ರಿಯೆ ನಡೆಯಿತು.

ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು, ವಿಶ್ವವಿದ್ಯಾನಿಲಯ ಕಲಾ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಮತಯಂತ್ರಗಳನ್ನು ಸ್ವೀಕರಿಸಲಾಯಿತು.

ಮತಯಂತ್ರ, ಮತಖಾತ್ರಿ ಯಂತ್ರ ಇರುವ ಕೊಠಡಿಗಳಿಗೆ ಬೀಗ ಹಾಕಲಾಯಿತು. ಶಸ್ತ್ರ ಸಜ್ಜಿತ ಅರೆಸೇನಾ ಪಡೆ, ಪೊಲೀಸ್ ಸಿಬ್ಬಂದಿ ಪ್ರತಿ ಕೊಠಡಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ADVERTISEMENT

ಮತ ಎಣಿಕೆ ಕೇಂದ್ರ ಮತಯಂತ್ರ, ಖಾತ್ರಿ ಯಂತ್ರಗಳನ್ನು ಒಪ್ಪಿಸಿದ ಬಳಿಕ ಮತಗಟ್ಟೆ ಅಧಿಕಾರಿಗಳು ನಿರಾಳವಾಗಿ ಮನೆಯತ್ತ ಸಾಗಿದರೆ, ಮತ ಪೆಟ್ಟಿಗೆಗಳು ಇರುವ ಭದ್ರತಾ ಕೊಠಡಿಯ ಮುಂದೆ ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣಿಟ್ಟು ಕಾಯಲು ಸನ್ನದ್ಧರಾದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಅವರು ಮತಯಂತ್ರ, ಮತಖಾತ್ರಿಯಂತ್ರ ಇರುವ ಕೊಠಡಿಗಳಿಗೆ ಕಲ್ಪಿಸಿದ ಭದ್ರತಾ ವ್ಯವಸ್ಥೆಯನ್ನು ಭಾನುವಾರ ಬೆಳಿಗ್ಗೆ ಮತ್ತು ಮಧ್ಯಾಹ್ನ ಪರಿಶೀಲನೆ ಮಾಡಿದರು.

ಮೂರು ಕಡೆ ಮತ ಎಣಿಕೆ: ಮತ ಎಣಿಕೆ ಮೇ 15ರಂದು ನಡೆಯಲಿದೆ. ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ ಕ್ಷೇತ್ರಗಳ ಮತ ಎಣಿಕೆಯನ್ನು ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು. ತುಮಕೂರು ಗ್ರಾಮಾಂತರ, ಗುಬ್ಬಿ, ಕುಣಿಗಲ್ ಕ್ಷೇತ್ರಗಳ ಮತ ಎಣಿಕೆಯನ್ನು ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜು ಹಾಗೂ ಕೊರಟಗೆರೆ, ಶಿರಾ, ಪಾವಗಡ ಮತ್ತು ಮಧುಗಿರಿ ಕ್ಷೇತ್ರಗಳ ಮತ ಎಣಿಕೆಯನ್ನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.