ADVERTISEMENT

ಕನ್ಯಕಾ ಪರಮೇಶ್ವರಿ ಅಮ್ಮನವರ ಉತ್ಸವ

49ನೇ ವರ್ಷದ ವಾಸವಿ ಜಯಂತಿ ಆಚರಣೆ ಪ್ರಯುಕ್ತ ಆರ್ಯ ವೈಶ್ಯ ಮಂಡಳಿ, ವಾಸವಿ ಯುವಜನ ಸಂಘದಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 13:36 IST
Last Updated 26 ಏಪ್ರಿಲ್ 2018, 13:36 IST
ತುಮಕೂರಿನಲ್ಲಿ ಬುಧವಾರ ರಾತ್ರಿ ನಡೆದ ಕನ್ಯಕಾ ಪರಮೇಶ್ವರಿ ರಾಜ ಬೀದಿ ಉತ್ಸವದಲ್ಲಿ ಚಂಡೆಮೇಳದವರು ವಾದ್ಯ ನುಡಿಸುತ್ತ ಸಾಗಿದರು (ಎಡಚಿತ್ರ). ಉತ್ಸವದಲ್ಲಿ ಡೊಳ್ಳು ಕುಣಿತ ತಂಡದವರು ಆಕರ್ಷಕ ಪ್ರದರ್ಶನ ನೀಡಿದರು
ತುಮಕೂರಿನಲ್ಲಿ ಬುಧವಾರ ರಾತ್ರಿ ನಡೆದ ಕನ್ಯಕಾ ಪರಮೇಶ್ವರಿ ರಾಜ ಬೀದಿ ಉತ್ಸವದಲ್ಲಿ ಚಂಡೆಮೇಳದವರು ವಾದ್ಯ ನುಡಿಸುತ್ತ ಸಾಗಿದರು (ಎಡಚಿತ್ರ). ಉತ್ಸವದಲ್ಲಿ ಡೊಳ್ಳು ಕುಣಿತ ತಂಡದವರು ಆಕರ್ಷಕ ಪ್ರದರ್ಶನ ನೀಡಿದರು   

ತುಮಕೂರು: ನಗರದ ಚಿಕ್ಕಪೇಟೆಯ ಆರ್ಯವೈಶ್ಯ ಮಂಡಳಿ ಹಾಗೂ ವಾಸವಿ ಯುವಜನ ಸಂಘ, ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಮಿತಿ, ವಾಸವಿ ಮಹಿಳಾ ಮಂಡಳಿ, ವಾಸವಿ ಭಜನಾ ಮಂಡಳಿ ಜಂಟಿಯಾಗಿ ಬುಧವಾರ 49ನೇ ವರ್ಷದ ವಾಸವಿ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.

ಬೆಳಿಗ್ಗೆ ಕನ್ನಿಕಾ ಪೂಜೆ, ಹಣ್ಣು ಹಂಪಲ ವಿತರಣೆ, ವಾಸವಿ ತುಲಾಭಾರ ಸೇವೆ ನಡೆಯಿತು. ಸಮಾಜದವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಸಂಜೆ ಕನ್ಯಕಾ ಪರಮೇಶ್ವರಿ ಅಮ್ಮನವರ ‘ರಾಜ ಬೀದಿ ಉತ್ಸವ’ಕ್ಕೆ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ನಗರದ ಜಯಣ್ಣ ಮತ್ತು ತಂಡದವರ ನಾಸಿಕ್ ಡೋಲ್ ತಂಡ, ಚಿಟ್ಟೆ ಮೇಳ, ಮಂಗಳೂರಿನ ಗೊಂಬೆ ಬಳಗ ತಂಡದ ಗಾರುಡಿಗೊಂಬೆಯಾಟ, ಬೆಂಗಳೂರಿನ ಅನೀಶ್ ತಂಡದವರಿಂದ ಚಂಡೆ ಮೇಳ, ಮಂಡ್ಯದ ಡೊಳ್ಳು ಕುಣಿತ ತಂಡ,ವಿದ್ವಾನ್ ಮನು ಮತ್ತು ತಂಡವರಿಂದ ನಾದಸ್ವರ ತಂಡ ಸೇರಿ ವಿವಿಧ ಕಲಾ ತಂಡಗಳು ಮೆರವಣಿಗೆಯುದ್ದಕ್ಕೂ ಸಾಗಿ ವಿಶೇಷ ಮೆರಗು ನೀಡಿದವು.

ADVERTISEMENT

ಚಿಕ್ಕಪೇಟೆ, ಮಂಡಿಪೇಟೆ ರಸ್ತೆ, ಆಯಿಲ್ ರಸ್ತೆ, ಅಗ್ರಹಾರ ರಸ್ತೆ ಮೂಲಕ ಕನ್ಯಕಾ ಪರಮೇಶ್ವರಿ ದೇವಸ್ಥಾನಕ್ಕೆ ಮೆರವಣಿಗೆ ಸಾಗಿತು.

ವಾಸವಿ ಯುವಜನ ಸಂಘದ ಅಧ್ಯಕ್ಷ ಲೋಕೇಶ್, ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಶ್ರೀಧರಮೂರ್ತಿ, ವಾಸವಿ ದೇವಸ್ಥಾನ ಸಮಿತಿ ಅಧ್ಯಕ್ಷ ಮೋಹನ್‌ಕುಮಾರ್,  ವಾಸವಿ ಭಜನಾ ಮಂಡಳಿಯ ಅಧ್ಯಕ್ಷ ಬ್ರಹ್ಮಾನಂದಂ, ವಾಸವಿ ಮಹಿಳಾ ಭಜನಾ ಮಂಡಳಿಯ ರತ್ನಾ ರವೀಂದ್ರನಾಥ್ ಇದ್ದರು.

ಹುಳಿಯಾರಿನಲ್ಲಿ ವಾಸವಿ ಜಯಂತಿ

ಹುಳಿಯಾರು: ಪಟ್ಟಣದ ಆರ್ಯವೈಶ್ಯ ಮಂಡಳಿಯಿಂದ ವಾಸವಿ ಜಯಂತಿಯನ್ನು ಸಂಭ್ರಮ ಸಡಗರದಿಂದ ಬುಧವಾರ ಆಚರಿಸಿದರು.

ವಾಸವಿ ಜಯಂತಿ ಅಂಗವಾಗಿ ಪಟ್ಟಣದಲ್ಲಿನ ಆರ್ಯವೈಶ್ಯ ಸಮುದಾಯದವರು ತಮ್ಮ ಅಂಗಡಿ ಮುಂಗಟ್ಟುಗಳಿಗೆ ರಜೆ ಘೋಷಿಸಿದ್ದರು. ವಾಸವಿ ಕಲ್ಯಾಣ ಮಂಟಪದಲ್ಲಿರುವ ಕನ್ನಿಕಾ ಪರಮೇಶ್ವರಿ ದೇಗುಲದಲ್ಲಿ ವಿಶೇಷ ಪೂಜಾ ವಿಧಿ–ವಿಧಾನಗಳು ನೆರವೇರಿದವು.

ಪಟ್ಟಣದ ಸಿ.ವಿ.ನಾಗರಾಜ್ ಮತ್ತು ದಂಪತಿ ಜಯಂತಿ ಅಂಗವಾಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಪ್ರಸಾದ ವಿತರಿಸಿದರು.

ಮಂಡಳಿ ಅಧ್ಯಕ್ಷ ಎಲ್.ಆರ್.ಚಂದ್ರಶೇಖರ್, ಕಾರ್ಯದರ್ಶಿ ಎಂ.ಎಸ್.ಬದರೀಶ್, ಸಮುದಾಯದ ಮುಖಂಡರು, ಯುವಕ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.