ತುಮಕೂರು: ಲೌಕಿಕ ಜಗತ್ತಿನಲ್ಲಿ ಇಲ್ಲದಿರುವ ವಸ್ತುವನ್ನು ಅತ್ಯಂತ ಸುಲಭವಾಗಿ ಸೃಷ್ಟಿಸುವುದು ಕವಿ ಹಾಗೂ ಚಿತ್ರಕಲಾವಿದನಿಂದ ಮಾತ್ರ ಸಾಧ್ಯ ಎಂಬುದಕ್ಕೆ ಅಲ್ಲಿನ ಕಲಾಕೃತಿಗಳು ಸಾಕ್ಷಿಯಾಗಿದ್ದವು.
ಅಂತಹ ಕಲಾಕೃತಿಗಳ ಪ್ರದರ್ಶನ ಇದ್ದದ್ದು ಸೋಮವಾರ ನಗರದ ರವೀಂದ್ರ ಕಲಾ ನಿಕೇತನದಲ್ಲಿ. ರಾಜ್ಯ ಲಲಿತ ಕಲಾ ಅಕಾಡೆಮಿ, ರವೀಂದ್ರ ಕಲಾ ನಿಕೇತನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಚಿತ್ರಕಲಾ ಪ್ರದರ್ಶನ ಹಾಗೂ ವಿಚಾರಗೋಷ್ಠಿಯಲ್ಲಿ ಕಲಾಕೃತಿ, ಚಿತ್ರಕಲೆ ಕುರಿತ ವಿಚಾರಗಳು ಸಮ್ಮೀಳಿತಗೊಂಡಿದ್ದವು.
ಸಮಕಾಲೀನ, ಜನಪದ, ಆದಿವಾಸಿ, ವಿಜಯನಗರ, ಸಾಂಪ್ರಾದಾಯಿಕ, ಅಲಂಕಾರಿ, ಮೈಸೂರು ಶೈಲಿ ಪ್ರಕಾರಗಳು. ಕನಸೆಂಬ ಕುದುರಯನ್ನೇರಿ ಹೊರಟ ಬಾಲಕನ ಮುಗ್ದ ಚಿತ್ರ ಒಂದೆಡೆಯಾದರೆ, ಒಂದೇ ಕಲಾಕೃತಿಯಲ್ಲಿ ಹಲವು ಸಾಮ್ರಾಜ್ಯಗಳ, ಶೈಲಿ, ಪ್ರಕಾರಗಳು ಇನ್ನೊಂದು ಮೂಲೆಯಲ್ಲಿ ನಿಂತು ನಮ್ಮನ್ನು ಕರೆಯುತ್ತಿರುವಂತೆ ಭಾಸವಾಗುತ್ತಿತ್ತು.
ಇಲ್ಲಿನ ಹಿರಿಯ ವಿದ್ಯಾರ್ಥಿಗಳು ರಚಿಸಿದ ಕೃತಿಗಳಿಂದ ನಮಗೆ ಉತ್ತಮ ಮಾರ್ಗದರ್ಶನ ದೊರೆಯುತ್ತದೆ ಎಂದು ಹಂಚಿಕೊಂಡವರು ದ್ವಿತೀಯ ವರ್ಷದ ಬಿವಿಎ ವಿದ್ಯಾರ್ಥಿಗಳಾದ ಪ್ರವೀಣಕುಮಾರ್, ಕಿರಣ್. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ರಚಿಸಿದ ಆರ್ಟ್ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಸ್.ಚಂದ್ರಪ್ಪ, ಒಂದು ದೇಶದ ಸಂಸ್ಕೃತಿಯನ್ನು ಅತ್ಯಂತ ವೈಭವಯುತವಾಗಿ ತೋರಿಸುವುದಕ್ಕೆ ಸಾಧ್ಯವಿರುವುದು ಕೇವಲ ಚಿತ್ರಕಲೆಯಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಬಾಪೂಜಿ ವಿದ್ಯಾಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಎಂ.ಬಸವಯ್ಯ, ರಾಜ್ಯ ಲಲಿತ ಕಲಾ ಅಕಾಡೆಮಿ ಸದಸ್ಯ ಕಿಶೋರ್ ಕುಮಾರ್, ಕಾಲೇಜು ಪ್ರಾಂಶುಪಾಲ ಬಾಬುರಾವ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಡಿ. ಚಂದ್ರಪ್ಪ, ಎಚ್.ಜಿ. ವಿಜಯಲಕ್ಷ್ಮೀ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.