ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿಯಲ್ಲಿ ಕಾಲರಾ ಕಾಣಿಸಿದ ಹಿನ್ನೆಲೆಯಲ್ಲಿ ಹೊನ್ನವಳ್ಳಿ ಮತ್ತು ಗ್ಯಾರಘಟ್ಟ ಗ್ರಾ.ಪಂ. ವ್ಯಾಪ್ತಿಯ ಜಾತ್ರೆ ಮತ್ತು ಸಂತೆಗಳನ್ನು ನಿಷೇಧಿಸಿರುವುದಾಗಿ ತಹಶೀಲ್ದಾರ್ ವಿಜಯಕುಮಾರ್ ಆದೇಶಿಸಿದ್ದಾರೆ.
ಹೊನ್ನವಳ್ಳಿಯಲ್ಲಿ ವಾಂತಿಭೇದಿಯಿಂದ ಇಬ್ಬರು ಮೃತ ಪಟ್ಟು, 60 ಮಂದಿ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಾತ್ರೆ, ಸಂತೆ ನಿಷೇಧಿಸಲಾಗಿದೆ. ಕಾಲರಾ ದೃಢಪಟ್ಟ ಹಿನ್ನೆಲೆಯಲ್ಲಿ ಸ್ವಚ್ಛತೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಡಂಗೂರ ಸಾರಿಸಲಾಯಿತು.
ಮಂಗಳವಾರ ರಾತ್ರಿ ಹೊನ್ನವಳ್ಳಿಯಲ್ಲಿ ಸ್ವಲ್ಪ ಮಳೆ ಸುರಿದ ಸಂದರ್ಭ ವಿದ್ಯುತ್ ಕೈಕೊಟ್ಟಿತು. ಆಸ್ಪತ್ರೆಯಲ್ಲಿ ಯುಪಿಎಸ್ ಸುಸ್ಥಿತಿಯಲ್ಲಿ ಇಲ್ಲದ್ದರಿಂದ ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ಪರದಾಡಬೇಕಾಯಿತು. ರಾತ್ರಿ 12ರಲ್ಲಿ ತಹಶೀಲ್ದಾರ್ ವಿಜಯಕುಮಾರ್ ಆಸ್ಪತ್ರೆಗೆ ತೆರಳಿ ಗ್ಯಾಸ್ ಲೈಟ್ ವ್ಯವಸ್ಥೆ ಮಾಡಿದರು.
ಬೆಳಗ್ಗೆ 8 ಗಂಟೆವರೆಗೆ ವಿದ್ಯುತ್ ಇಲ್ಲದೆ ಚಿಕಿತ್ಸೆಗೆ ತೊಂದರೆಯಾಗಿತ್ತು. ಗಂಭೀರ ಪರಿಸ್ಥಿತಿಯಲ್ಲಿಯೂ ವಿದ್ಯುತ್ ಸಂಪರ್ಕ ಸರಿಪಡಿಸಲು ಬೆಸ್ಕಾಂ ಸಿಬ್ಬಂದಿ ಪ್ರಯತ್ನಿಸಲಿಲ್ಲ ಎಂದು ಗ್ರಾಮಸ್ಥರು ದೂರಿದರು.
ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಎಂದು ತಾ.ಪಂ. ಸದಸ್ಯ ಹರೀಶ್ ಆರೋಪಿಸಿದರು. ಒಂದೇ ಟ್ಯಾಂಕರ್ನಲ್ಲಿ ನೀರು ಸರಬರಾಜು ಮಾಡುತ್ತಿರುವುದರಿಂದ ನೀರಿಗೆ ತೀವ್ರ ತೊಂದರೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾ.ಪಂ.ಗೆ ಆಯ್ಕೆ
ಕುಣಿಗಲ್: ತಾಲ್ಲೂಕಿನ ಅಮೃತೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಎಚ್.ವಿ.ಬಸವರಾಜು ಅವಿರೋಧ ಆಯ್ಕೆಯಾಗಿದ್ದಾರೆ. ತಹಸೀಲ್ದಾರ್ ಎಸ್.ಆರ್.ಕೃಷ್ಣಯ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.