ADVERTISEMENT

ತೆಂಗು ಬೆಳೆಗಾರರಿಗೆ ರೂ. 64 ಕೋಟಿ ನೆರವು

ಪ್ರಜಾವಾಣಿ ವಿಶೇಷ
Published 18 ಫೆಬ್ರುವರಿ 2014, 9:07 IST
Last Updated 18 ಫೆಬ್ರುವರಿ 2014, 9:07 IST
ತೆಂಗು ಬೆಳೆಗಾರರಿಗೆ ರೂ. 64 ಕೋಟಿ ನೆರವು
ತೆಂಗು ಬೆಳೆಗಾರರಿಗೆ ರೂ. 64 ಕೋಟಿ ನೆರವು   

ತುಮಕೂರು: ಮೂರು ವರ್ಷಗಳಿಂದ ನಿರಂತರ ಬರ ಹಾಗೂ ವಿವಿಧ ರೋಗ ಬಾಧೆಯಿಂದ ಜಿಲ್ಲೆಯ ತೆಂಗು ಬೆಳೆ ನೆಲಕಚ್ಚತೊಡಗಿದ್ದು ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಹಾಯ ಹಸ್ತ ಚಾಚಲು ಮುಂದಾಗಿದೆ.

ನೈಸರ್ಗಿಕ ವಿಕೋಪ ಪರಿಹಾರ ನಿಧಿಯಡಿ ನೆರವಿಗೆ ಧಾವಿಸಿದ್ದು ಜಿಲ್ಲೆಗೆ ಒಟ್ಟಾರೆ ತೋಟಗಾರಿಕೆ ಬೆಳೆಗೆ ರೂ. 64.69 ಕೋಟಿ ನೆರವು ನೀಡಲಿದೆ. ಕಂದಾಯ ಇಲಾಖೆ ಸೂಚನೆ ಮೇರೆಗೆ ಜಿಲ್ಲಾ ತೋಟಗಾರಿಕೆ ಇಲಾಖೆ ರೂ. 64.69 ಕೋಟಿ ಮೊತ್ತದ ಪರಿಹಾರದ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದೆ.

ತೆಂಗು ಬೆಳೆ ಮಾತ್ರವಲ್ಲ ತೋಟಗಾರಿಕೆ ಬೆಳೆಗಳಾದ ಅಡಿಕೆ, ಮಾವು, ಸಪೋಟಾ, ದಾಳಿಂಬೆ ಹಾಗೂ ಹೂವು, ತರಕಾರಿ ಬೆಳೆಗೂ ಪರಿಹಾರ ಸಿಗಲಿದೆ. ಹೂ, ತರಕಾರಿ ತೋಟಕ್ಕೆ ಪರಿಹಾರಕ್ಕಾಗಿ ರೂ. 3 ಕೋಟಿ ಬೇಕಾಗಲಿದೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ವರದಿ ನೀಡಿದೆ. ವರದಿ ಆಧರಿಸಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ.

ಗೋರಖ್‌ ಸಿಂಗ್‌ ವರದಿ ತೆಂಗು ಕೃಷಿಕರ ಮೂಗಿಗೆ ತುಪ್ಪ ಸವರುವ ಕೆಲಸವಷ್ಟೇ ಮಾಡಿದ್ದು ಅದರಿಂದ ಏನೇನು ಪ್ರಯೋಜನವಿಲ್ಲ­ದಂತಾ­ಗಿದೆ. ಇಂತಹ ಸಮಯದಲ್ಲಿ ಹೊಸದಾಗಿ ಬರ ಪರಿಹಾರವಾಗಿ ಸಹಾಯ ನೀಡಲು ಮುಂದಾಗಿರುವುದು ಕೃಷಿಕರಿಗೆ ಅನುಕೂಲ­ವಾಗಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ತೆಂಗು ಬೆಳೆಯಲ್ಲಿ ಜಿಲ್ಲೆ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. 1.47 ಲಕ್ಷ ಹೆಕ್ಟೇರ್‌ನಲ್ಲಿ ತೆಂಗು ಬೆಳೆಯಲಾಗುತ್ತಿದೆ. ಇದರಲ್ಲಿ ಶೇ 90­ರಷ್ಟು ಪ್ರದೇಶ ಮಳೆಯಾಶ್ರಿತವಾಗಿದೆ. ಬರ, ರೋಗದ ಕಾರಣ ಕಳೆದ ಎರಡು ವರ್ಷಗಳಲ್ಲಿ 4800 ಹೆಕ್ಟೇರ್‌ ತೆಂಗು ಪ್ರದೇಶ ಒಣಗಿದೆ. 36500 ಹೆಕ್ಟೇರ್‌ ಪ್ರದೇಶದಲ್ಲಿ ಶೇ 50ರಷ್ಟು ಇಳುವರಿ ಕಡಿಮೆಯಾಗಿದೆ ಎಂದು ತೋಟಗಾರಿಕೆ ಇಲಾಖೆ ವರದಿ ತಿಳಿಸಿದೆ.

‘ಸಣ್ಣ, ದೊಡ್ಡ ರೈತರು ಎಂಬ ತಾರತಮ್ಯ ಮಾಡದೇ ಪ್ರತಿ ಬೆಳೆಗಾರರಿಗೂ ಪ್ರತಿ ಹೆಕ್ಟೇರ್‌ ತೆಂಗಿಗೆ ರೂ. 24 ಸಾವಿರ ಪರಿಹಾರ ಸಿಗಲಿದೆ.

ಸಂಪೂರ್ಣವಾಗಿ ಮರ ಒಣಗಿದ್ದರೆ, ಶೇ 50ರಷ್ಟು ಇಳುವರಿ ಕಡಿಮೆಯಾಗಿದ್ದರೆ ಮಾತ್ರ ಪರಿಹಾರ ನೀಡಲಾಗುವುದು. ಪರಿಹಾರದ ಮಾನದಂಡ ರೂಪಿಸಲಾಗಿದ್ದು ಇಲಾಖೆ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ  ಅಂದಾಜಿಸಲಿದ್ದಾರೆ. ಸಪೋಟಾ, ದಾಳಿಂಬೆ, ಅಡಿಕೆ ತೋಟಕ್ಕೂ ಇಷ್ಟೇ ಪ್ರಮಾಣದ ಪರಿಹಾರ ಸಿಗಲಿದೆ. ತರಕಾರಿ ಬೆಳೆ ಒಣಗಿದರೆ ಹೆಕ್ಟೇರ್‌ಗೆ ರೂ. 9 ಸಾವಿರ ಪರಿಹಾರ ನಿಗದಿ ಮಾಡಲಾಗಿದೆ. ಆಯಾಯ ತಹಶೀಲ್ದಾರ್‌ ಮೂಲಕ ಪರಿಹಾರಕ್ಕಾಗಿ ಅರ್ಜಿ ಆಹ್ವಾನಿಸಲಾಗುವುದು’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಸವಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಹೀಗೆ ಮಾಡಿ ತೋಟ ಉಳಿಸಿಕೊಳ್ಳಿ
ಬಿಸಿಲಿನ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೆಂಗಿನ ತೋಟ ಉಳಿಸಿಕೊಳ್ಳುವ ಸವಾಲು ಬೆಳೆ­ಗಾರರ ಮುಂದಿದೆ. ನೀರಿನ ಕೊರತೆಯಾದರೆ ಇಳುವರಿಯೂ ಕಡಿಮೆಯಾಗಲಿದೆ. ಅಲ್ಲದೇ ರೋಗ ತಗುಲಬಹುದು.

ಸರ್ಕಾರ ಹನಿ ನೀರಾವರಿಗೆ ಶೇ 90ರಷ್ಟು ಸಹಾಯಧನ ನೀಡಲಿದ್ದು ಎಲ್ಲರೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ತೆಂಗಿನ ಮರದ ಸುತ್ತಲೂ ಗುಂಡಿ ತೋಡಿ ಅದರಲ್ಲಿ ತೆಂಗಿನ ಸಿಪ್ಪೆ ಮುಚ್ಚುವ ಮೂಲಕ ತೋಟದ ತೇವಾಂಶ ಕಾಪಾಡಬೇಕು. ಮರದ ಸುತ್ತಲೂ ಒಣಗಿದ ಗರಿ, ಹಸಿರು ಮುಚ್ಚಿಗೆ ಮಾಡುವ ಮೂಲಕವೂ ಮರಗಳನ್ನು ಉಳಿಸಿ­ಕೊಳ್ಳ­ಬಹುದು. ಪರಿಹಾರ ಹಣವನ್ನು ಇದ­ಕ್ಕಾಗಿ ಬಳಸಿಕೊಂಡರೆ ಒಳ್ಳೆಯದು ಎಂದು ಸಹಾ­ಯಕ ತೋಟಗಾರಿಕಾ ಅಧಿಕಾರಿ ಆರ್.ನಾಗರಾಜ್‌ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT