ADVERTISEMENT

ನಾಟಕಗಳಿಂದ ಗಾಢ ಪರಿಣಾಮ

​ಪ್ರಜಾವಾಣಿ ವಾರ್ತೆ
Published 28 ಮೇ 2018, 8:50 IST
Last Updated 28 ಮೇ 2018, 8:50 IST

ತುಮಕೂರು: ಮನುಷ್ಯನ ಪ್ರಜ್ಞೆಯನ್ನು ವಿಸ್ತರಿಸುವ ಕೆಲಸವನ್ನು ನಾಟಕಗಳು ಮಾಡುತ್ತವೆ ಎಂದು ಹಿರಿಯ ಸಾಹಿತಿ ಪದ್ಮಪ್ರಸಾದ್ ಅಭಿಪ್ರಾಯಪಟ್ಟರು.

ನಗರದ ಡಾ.ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ನಡೆದ ರಂಗಭೂಮಿ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಅನುಭವವೆಂಬುದು ನಮಗೆ ಹಲವಾರು ಪಾಠಗಳನ್ನು ಕಲಿಸುತ್ತದೆ ಎಂದರು.

ಶ್ರವಣ ಕುಮಾರ, ಸತ್ಯಹರಿಶ್ಚಂದ್ರ ನಾಟಕಗಳು ಮಹಾತ್ಮಗಾಂಧಿ ಮೇಲೆ ಗಾಢವಾದ ಪರಿಣಾಮ ಬೀರಿದ್ದವು. ಹಾಗಾಗಿ ಯುವ ಜನರು ನಾಟಕಗಳನ್ನು ನೋಡುವ ಹವ್ಯಾ‌ಸವನ್ನು ಬೆಳೆಸಿಕೊಳ್ಳಬೇಕು ಎಂದರು.

ADVERTISEMENT

ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜು ಮಾತನಾಡಿ, ಕನ್ನಡ ವೃತ್ತಿ ರಂಗಭೂಮಿಗೆ 140 ವರ್ಷಗಳ ಇತಿಹಾಸ ಇದೆ. ರಾಜ್ಯದ ವಿವಿಧೆಡೆ ಕಂಡು ಬರುವ ಮೂಡಲಪಾಯ, ಪಡುವಲಪಾಯ, ಹರಿಕಥೆಗಳು ಬಯಲಾಟದ ವಿವಿಧ ರೂಪಗಳೇ ಆಗಿವೆ ಎಂದರು.

ಅಖಿಲ ಕರ್ನಾಟಕ ಕೀತನ ಕಲಾ ಪರಿಷತ್ತಿನ ಸಂಚಾಲಕ ಎನ್.ಪಿ.ರವಿಕುಮಾರ ದಾಸ್ ಮಾತನಾಡಿ, ಹರಿಕಥೆಯನ್ನು ಭದ್ರಗಿರಿ ಅಚ್ಯುತದಾಸರ ವಂಶಸ್ಥರು ನಾಡಿಗೆ ಪರಿಚಯಿಸಿದರು. ಲಕ್ಷ್ಮಣದಾಸರು ಕಥಾ ಕೀರ್ತನೆಗಳನ್ನು ಜನಕಥೆಗಳಾಗಿ ಜನರ ಬಳಿಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದರು ಎಂದರು.

ಸಾಹಿತಿ ಎನ್.ನಾಗಪ್ಪ ಮಾತನಾಡಿ, ಲಕ್ಷ್ಮಣದಾಸ್‌ ಅವರು ಅಕ್ಷರಗಳನ್ನೇ ಸಾಧನೆಯ ಮೆಟ್ಟಿಲಾಗಿಸಿಕೊಂಡಿದ್ದರು. ಹರಿಕಥೆಗಳನ್ನು ನಮ್ಮ ನಡುವೆ ಆಗಿಹೋದ, ಬದುಕಿರುವ ವ್ಯಕ್ತಿಗಳ ವ್ಯಕ್ತಿತ್ವವನ್ನು ನಾಡಿನ ಜನತೆಗೆ ಪರಿಚಯಿಸುವ ಮೂಲಕ ಜನರ ಬಳಿ ತೆಗೆದುಕೊಂಡು ಹೋಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.

ಭೂಮಿ ಬಳಗದ ಅಧ್ಯಕ್ಷ ಜಿ.ಎಸ್.ಸೋಮಣ್ಣ ಮಾತನಾಡಿ, ಕಲಾವಿದರು ಹಾಗೂ ಸಾಹಿತಿಗಳು ಸಮಾಜದ ಆಸ್ತಿ. ಪೌರಾಣಿಕ ನಾಟಕಗಳ ತವರೂರಾದ ತುಮಕೂರು ಜಿಲ್ಲೆಯಲ್ಲಿ ಪೌರಾಣಿಕ ನಾಟಕಗಳನ್ನು ಪ್ರೋತ್ಸಾಹಿಸುವವರ ದೊಡ್ಡ ದಂಡೆ ಇದೆ ಎಂದರು.

ಬುದ್ಧ, ಬಸವ, ಅಂಬೇಡ್ಕರ್, ಶಿವಕುಮಾರ ಸ್ವಾಮೀಜಿ, ಗುಬ್ಬಿವೀರಣ್ಣ ಅವರನ್ನು ಪರಿಚಯಿಸಿದ ಲಕ್ಷ್ಮಣದಾಸ್ ಅವರೀಗ  ಚಿತ್ರದುರ್ಗದ ಶಿವಮೂರ್ತಿ ಮುರುಘಾರಾಜ ಶರಣರ ಜನಕಥೆ ಮಾಡಲು ಒಪ್ಪಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲಕ್ಷ್ಮಣದಾಸ್‌, ಸಿ.ವಿ.ಮಹದೇವಯ್ಯ, ಜ್ಞಾನ ಬುತ್ತಿ ಕೇಂದ್ರದ ಶಾಂತಿಲಾಲ್, ಕೆಂಕೆರೆ ಮಲ್ಲಿಕಾರ್ಜುನ್, ಉಪನ್ಯಾಸಕ ಲಕ್ಷ್ಮಿರಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.