ADVERTISEMENT

ಬೆಸ್ಕಾಂ ಎಂಜಿನಿಯರ್‌ಗೆ ಅರಣ್ಯ ಇಲಾಖೆ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 4:35 IST
Last Updated 2 ಆಗಸ್ಟ್ 2012, 4:35 IST

ತುಮಕೂರು: ಇಲ್ಲಿಗೆ ಸಮೀಪದ ಕುಣಿಗಲ್ ರಸ್ತೆಯ ಬಾಣಾವರದಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ರಸ್ತೆಯಲ್ಲಿದ್ದ ಎರಡು ಮರಗಳನ್ನು ಬುಡ ಸಮೇತ ಉರುಳಿಸಿ, 30 ಮರಗಳ ದೊಡ್ಡದೊಡ್ಡ ಕೊಂಬೆ ಕಡಿದಿರುವ ಘಟನೆಗೆ ಸಂಬಂಧಿಸಿದಂತೆ ಬೆಸ್ಕಾಂ ಎಂಜಿನಿಯರ್ ವಿರುದ್ಧ ಅರಣ್ಯ ಇಲಾಖೆ ದೂರು ದಾಖಲಿಸಿಕೊಂಡಿದೆ.

ಅರಣ್ಯ ಇಲಾಖೆ ಅನುಮತಿ ಪಡೆಯದೆ ಏಕಾಏಕಿ ರಸ್ತೆಯಲ್ಲಿದ್ದ ಎರಡು ಮರ ಕಡಿಯಲಾಗಿದೆ. ಅಲ್ಲದೆ 30 ಮರಗಳ ಕೊಂಬೆ ಕಡಿಯಲಾಗಿದೆ. ಸಾರ್ವಜನಿಕರಿಂದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಲಾಯಿತು. ಕಡಿದಿರುವ ಮರ ಹಾಗೂ ಕೊಂಬೆಗಳನ್ನು ಅರಣ್ಯ ಇಲಾಖೆ ಸುಪರ್ದಿಗೆ ಪಡೆಯಲಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಗಂಗೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.

ನಿರಂತರ ಜ್ಯೋತಿ ಅಳವಡಿಸಲು ಮರ ಕಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದೂವರೆಗೂ ವಿಚಾರಣೆಗೆ ಬೆಸ್ಕಾಂ ಅಧಿಕಾರಿಗಳು ಸಿಕ್ಕಿಲ್ಲ. ಬೆಸ್ಕಾಂ ಎಂಜಿನಿಯರ್ ವಿರುದ್ಧ ಅರಣ್ಯ ಕಾಯ್ದೆ ಸೆಕ್ಷನ್ 33ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಎಂಜಿನಿಯರ್ ಹೆಸರು ಏನೆಂದು ಕೂಡ ಬೆಸ್ಕಾಂ ಅಧಿಕಾರಿಗಳು ತಿಳಿಸುತ್ತಿಲ್ಲ. ಆ ಎಂಜಿನಿಯರ್ ವಿಚಾರಣೆಗೆ ಲಭ್ಯವಾಗಿಲ್ಲ. ಸೋಮವಾರದಿಂದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸುವುದಾಗಿ ಹೇಳಿದರು.

ಆಡಳಿತ ಪಕ್ಷದ ಪ್ರಮುಖ ರಾಜಕಾರಣಿಯೊಬ್ಬರ ಜಮೀನಿನಲ್ಲಿ ಉದ್ಯಮ ಆರಂಭಿಸುವ ಸಲುವಾಗಿ ವಿದ್ಯುತ್ ಸಂಪರ್ಕ ನೀಡಲು ಮರಗಳನ್ನು ಮನಸ್ಸಿಗೆ ಬಂದಂತೆ ಕಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.