ADVERTISEMENT

ಮಾನಸಿಕ ಆರೋಗ್ಯ; ನಿರ್ಲಕ್ಷ್ಯ ಬೇಡ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 9:12 IST
Last Updated 14 ಅಕ್ಟೋಬರ್ 2017, 9:12 IST

ತುಮಕೂರು: ‘ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರೂ ಪೈಪೋಟಿಗೆ ಬೀಳುತ್ತಿರುವುದರಿಂದ ಸಹಜವಾಗಿಯೇ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಕಾರಣ ಪ್ರತಿಯೊಬ್ಬರೂ ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ’ ಎಂದು ಮನೋವೈದ್ಯ ಡಾ.ಅನಿಲ್‌ಕುಮಾರ್ ಕರೆ ನೀಡಿದರು

ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ, ತುಮಕೂರು ಹಾಗೂ ಹೇಮಾದ್ರಿ ಸ್ನಾತಕೋತ್ತರ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಈಚೆಗೆ ನಡೆದ ಮಾನಸಿಕ ಆರೋಗ್ಯ ದಿನಾಚರಣೆ ಹಾಗೂ ಪ್ರಥಮ ಅರ್ಥಶಾಸ್ತ್ರ, ಸಮಾಜ ಕಾರ್ಯ (ಎಂ.ಎಸ್.ಡಬ್ಲ್ಯೂ) ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಒತ್ತಡದ ಬದುಕಿಗೆ ಸಿಲುಕುತ್ತಿದ್ದಾರೆ. ಆದರೆ ಈ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಯಾರೊಬ್ಬರೂ ಚಿಂತಿಸುವುದಿಲ್ಲ. ದೈಹಿಕ ಆರೋಗ್ಯದ ಬಗ್ಗೆ ಮಾತ್ರವೇ ಗಮನ ಹರಿಸುತ್ತಾ, ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಇದರ ಪರಿಣಾಮ ಒಟ್ಟಾರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ’ ಎಂದರು.

ADVERTISEMENT

‘ಕಲಿಯುವ ಹಾಗೂ ಕಲಿಸುವ ವಾತಾವರಣದಲ್ಲಿ ವಿದ್ಯಾರ್ಥಿ ಮತ್ತು ಪೋಷಕರ ನಡುವೆ ಉತ್ತಮ ಬಾಂಧವ್ಯ ಇರಬೇಕು. ಕೆಲಸ ಮಾಡುವ ಸ್ಥಳಗಳಲ್ಲಿ ಸಹವರ್ತಿಗಳ ನಡುವೆ ಪರಸ್ಪರ ಉತ್ತಮ ಬಾಂಧವ್ಯ ಇರಬೇಕು. ಆಗ ಮಾತ್ರ ನಮ್ಮ ಆರೋಗ್ಯ ವೃದ್ಧಿಸುತ್ತದೆ. ಆದರೆ ಬಹಳಷ್ಟು ಕಡೆಗಳಲ್ಲಿ ಬಾಂಧವ್ಯಕ್ಕೆ ಬದಲಾಗಿ ವ್ಯಕ್ತಿ ವೈಷಮ್ಯ ಹೆಚ್ಚುತ್ತಿದೆ. ಇದು ಮನುಷ್ಯನ ಬದುಕಿಗೆ ಖಂಡಿತ ಒಳ್ಳೆಯದಲ್ಲ. ಜೀವನ ಕೌಶಲ್ಯವನ್ನು ಯಾರು ಉತ್ತಮವಾಗಿ ಬೆಳೆಸಿಕೊಳ್ಳುತ್ತಾರೋ, ಅವರು ಬದುಕಿನಲ್ಲಿಯೂ ಉತ್ತಮ ಬದುಕನ್ನು ಕಂಡುಕೊಳ್ಳುತ್ತಾರೆ’ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಜಾಗೃತಿ ಕುರಿತು ಕಿರುನಾಟಕ ಪ್ರದರ್ಶಿಸಿದ ತಂಡಕ್ಕೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಸಚಿನ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಚ್.ಕೆ.ಕಾವ್ಯ, ವರದಕ್ಷಿಣೆ ವಿರೋಧಿ  ವೇದಿಕೆಯ ಟಿ.ಆರ್.ಅನಸೂಯ, ಸಿ.ಎಲ್.ಸುನಂದಮ್ಮ, ಲಲಿತ ಮಲ್ಲಪ್ಪ, ಗೀತಾ ನಾಗೇಶ್, ಅಕ್ಕಮ್ಮ, ಸಾಂತ್ವನ ಕೇಂದ್ರದ ಅಂಬುಜಾಕ್ಷಿ, ಪಾರ್ವತಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.