ADVERTISEMENT

ರ‍್ಯಾಲಿ ಫಾರ್ ರಿವರ್ಸ್‌ಗೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 9:52 IST
Last Updated 2 ಅಕ್ಟೋಬರ್ 2017, 9:52 IST
ಪಾವಗಡದಲ್ಲಿ ಶನಿವಾರ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ರ‍್ಯಾಲಿ ಫಾರ್ ರಿವರ್ಸ್ ಅಭಿಯಾನಕ್ಕೆ ಬೆಂಬಲ ಸೂಚಿಸಿ ಜಾಗೃತಿ ಜಾಥಾ ನಡೆಸಲಾಯಿತು
ಪಾವಗಡದಲ್ಲಿ ಶನಿವಾರ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ರ‍್ಯಾಲಿ ಫಾರ್ ರಿವರ್ಸ್ ಅಭಿಯಾನಕ್ಕೆ ಬೆಂಬಲ ಸೂಚಿಸಿ ಜಾಗೃತಿ ಜಾಥಾ ನಡೆಸಲಾಯಿತು   

ಪಾವಗಡ: ನದಿಗಳ ಸಂರಕ್ಷಣೆ ಮಾಡುವಂತೆ ಆಗ್ರಹಿಸಿ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್, ಪಾವಗಡ ಯುವಸೇನೆ, ವಿಶ್ವ ಗ್ರಾಮೋದಯ, ರೋಟರಿ ಸಂಸ್ಥೆ ಪದಾಧಿಕಾರಿಗಳು ರ‍್ಯಾಲಿ ಫಾರ್ ರಿವರ್ಸ್‌ಗೆ ಬೆಂಬಲ ಸೂಚಿಸಿ ಪಟ್ಟಣದಲ್ಲಿ ಅರಿವು ಜಾಥಾ ನಡೆಸಿದರು.

ನಿರೀಕ್ಷಣಾ ಮಂದಿರದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಶನಿಮಹಾತ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನದಿಗಳನ್ನು ಸಂರಕ್ಷಿಸುವಂತೆ ಘೋಷಣೇ ಕೂಗಿದರು.

ವಿಶ್ವ ಗ್ರಾಮೋದಯ ಸಂಸ್ಥಾಪನಾ ಅಧ್ಯಕ್ಷ ದಾಸಣ್ಣ ಮಾತನಾಡಿ, ‘ನದಿ ಜೋಡಣೆ ಜತೆಯಲ್ಲಿಯೇ ಇರುವ ನದಿಗಳನ್ನು ಸಂರಕ್ಷಣೆ ಮಾಡುವ ಕೆಲಸವಾಗಬೇಕು. ನದಿಗೆ ಹರಿದು ಬರುವ ಜಲ ಮೂಲಗಳ ಒತ್ತುವರಿಯನ್ನು ತೆರವುಗೊಳಿಸುವ ಕೆಲಸವಾಗಬೇಕು’ ಎಂದರು.

ADVERTISEMENT

ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ ಮಾತನಾಡಿ, ‘ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಸಾಕಷ್ಟಿದೆ. ತಾಲ್ಲೂಕಿನ ಏಕೈಕ ಉತ್ತರಪಿನಾಕಿನಿ ನದಿಯನ್ನು ಸಂರಕ್ಷಿಸಬೇಕು. ನದಿ ಬತ್ತಿ ಹೋಗಿದ್ದು, ನದಿ ಆಸು ಪಾಸಿನಲ್ಲಿ ಗಿಡ ಮರಗಳನ್ನು ಬೆಳೆಸಿ ನೀರು ಹರಿಯುವಂತೆ ಮಾಡಬೇಕು’ ಎಂದರು.

ಶಿಕ್ಷಕ ಗೋವಿಂದರಾಜಶೆಟ್ಟಿ ಮಾತನಾಡಿ, ‘ನದಿಗಳು, ಜಲ ಮೂಲಗಳ ಸಂರಕ್ಷಣೆಯಿಂದ ಜೀವ ಸಂಕುಲದ ಉಳಿವು ಸಾಧ್ಯ. ಇಲ್ಲವಾದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಜೀವ ಕೋಟಿಗಳ ಮಾರಣ ಹೋಮವಾಗುತ್ತದೆ. ರ‍್ಯಾಲಿ ಫಾರ್ ರಿವರ್ಸ್ ಅಭಿಯಾನಕ್ಕೆ ಪ್ರತಿಯೊಬ್ಬರು ಬೆಂಬಲ ಸೂಚಿಸಬೇಕು. ಕೆರೆ, ಕಟ್ಟೆ, ಹಳ್ಳ, ಕೊಳ್ಳ, ತಲಪರಿಗೆಗಳನ್ನು ಸಂರಕ್ಷಿಸಿದಲ್ಲಿ ಅಂತರ್ಜಲ ಮಟ್ಟ ಹೆಚ್ಚುವುದರೊಂದಿಗೆ, ಬರವನ್ನು ತಡೆಯಬಹುದು’ ಎಂದರು.

ರೋಟರಿ ಅಧ್ಯಕ್ಷ ಗೊರತಿ ನಾಗರಾಜು, ಜ್ಞಾನೇಶ್, ಶಶಾಂಕ್, ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಲಕ್ಷ್ಮಿನಾರಾಯಣ್ ಮಾತನಾಡಿದರು. ಯುವಸೇನೆ ಪದಾಧಿಕಾರಿ ನರಸೇಗೌಡ, ಧನುಸಿಂಹಾದ್ರಿ, ಹರ್ಷವರ್ಧನ್, ಪಾವಗಡ ಸೂರಿ, ಪವನ್ ಕುಮಾರ್, ಶ್ರೀರಾಮ ಸೇನೆ ಅಧ್ಯಕ್ಷ ಕಾವಲಗೆರೆ ರಾಮಾಂಜಿ, ಶೇಖರ್, ರೋಟರಿ ಕಾರ್ಯದರ್ಶಿ ಯಜಮಾನ್ ನಾಗೇಂದ್ರ, ಶಶಿಕಿರಣ್, ಡಾ.ಮಾಕಂ ಪ್ರಭಾಕರ್, ಬಿ.ಎಸ್.ಪಿ.ಮಂಜುನಾಥ್, ನಮ್ಮ ಹಕ್ಕು ರಾಜ್ಯ ಪ್ರಧಾನ ಕಾರ್ಯದರ್ಶಿ ಹರಿನಾಥ್, ಲಕ್ಷ್ಮಿನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.