ಮಧುಗಿರಿ: ಪಟ್ಟಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶುಕ್ರವಾರ ಜಿಲ್ಲಾಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ನಡೆಯಿತು.
ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕೊರಟಗೆರೆ ತಾಲ್ಲೂಕಿನ ಅರಸಾಪುರ ಸರ್ಕಾರಿ ಪ್ರೌಢಶಾಲೆ ಹಾಗೂ ಜಟ್ಟಿ ಅಗ್ರಹಾರ ಸರ್ಕಾರಿ ಪ್ರೌಢಶಾಲೆಗಳು ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾದವು.
ಶಿರಾ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ತೃತಿಯ ಸ್ಥಾನ ಪಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಡಿಡಿಪಿಐ ಟಿ.ಎಸ್.ಆಂಜನಪ್ಪ, `ಜಗತ್ತಿಗೆ ವಿಜ್ಞಾನ ಕ್ಷೇತ್ರದ ಕೊಡುಗೆ ದೊಡ್ಡದಾಗಿದೆ. ವಿಜ್ಞಾನದಿಂದ ಅನುಕೂಲ ಹಾಗೂ ಅನಾನುಕೂಲವು ಇದೆ. ಮನುಕುಲವು ಎಲ್ಲರ ಒಳಿತಿಗಾಗಿ ವಿಜ್ಞಾನ ಬಳಸುವುದರತ್ತ ಚಿಂತಿಸುವ ಅಗತ್ಯವಿದೆ' ಎಂದು ಹೇಳಿದರು.
ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪಾವಗಡ, ಶಿರಾ, ಮಧುಗಿರಿ, ಕೊರಟಗೆರೆ ತಾಲ್ಲೂಕಿನ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ವಿಷಯ ಪರಿವೀಕ್ಷಕ ವೇದಮೂರ್ತಿ, ಉಪನ್ಯಾಸಕ ನಟರಾಜ್, ಪಂಕಜಾ, ಮುಖ್ಯ ಶಿಕ್ಷಕ ರಾಜಶೇಖರ್, ತೀರ್ಪುಗಾರರಾಗಿ ಮಲ್ಲಿಕಾರ್ಜುನ್, ಪ್ರತಿಭಾ, ಹುಸೇನ್, ಡಾ.ವಿಜಯಕುಮಾರ್ ಇತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.