ತುರುವೇಕೆರೆ: ಶ್ರೀರಂಗಪಟ್ಟಣ-ಬೀದರ್ ರಾಷ್ಟ್ರೀಯ ಹೆದ್ದಾರಿ 150 ಎ ತಾಲ್ಲೂಕಿನ ಮೂಲಕ ಹಾಯ್ದು ಹೋಗಿದ್ದು, ಮಾಯಸಂದ್ರ ರಸ್ತೆಯ ಮದ್ದನಹಳ್ಳಿ ಗೇಟ್ ಬಳಿ ಇರುವ ಸೇತುವೆಯ ತಡೆಗೋಡೆ ಶಿಥಿಲವಾಗಿ ಬಿದ್ದು ಹಲವಾರು ಅಪಘಡಗಳು ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಈಗಾಗಲೇ ಹಲವಾರು ಬಾರಿ ಅಪಘಾತಗಳು ಸಂಭವಿಸಿವೆ. ರಾತ್ರಿಯ ವೇಳೆ ತಡೆಗೋಡೆ ಕಾಣದೆ ಸೇತುವೆ ಪಕ್ಕದ ಹಳ್ಳಕ್ಕೆ ಬಿದ್ದು, ಸತ್ತಿರುವ ಉದಾಹರಣೆಗಳಿವೆ.
ಸೇತುವೆ ಶಿಥಿಲಗೊಂಡು ವರ್ಷಗಳೂ ಕಳೆದರೂ ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸದೆ ಇರುವುದು ವಿಪರ್ಯಾಸವೇ ಸರಿ ಎಂದು ಗ್ರಾಮಸ್ಥರು ದೂರಿದರು.
ತಾಲ್ಲೂಕಿನಲ್ಲಿ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿಯ ಅಗಲವು ಸಹ ಕಡಿಮೆ ಇದ್ದು, ತುರುವೇಕೆರೆ ಗಡಿ ಬಿಟ್ಟ ನಂತರ ರಸ್ತೆಯ ಅಗಲವನ್ನು ಹೆಚ್ಚಾಗಿ ನಿರ್ಮಾಣ ಮಾಡಲಾಗಿದೆ.
ಆದರೆ ತಾಲ್ಲೂಕಿನಲ್ಲಿ ಮಾತ್ರ ಕಿರಿದಾದ ರಸ್ತೆಯನ್ನು ಏಕೆ ಮಾಡಿಲಾಗಿದೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದಾಗಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಬಿ.ಸುರೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.