ADVERTISEMENT

ಸಮರ್ಪಕ ಸೇವೆಗಾಗಿ ಎಸ್ ಬಿಐ ಬ್ಯಾಂಕ್ ಗ್ರಾಹಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 10:11 IST
Last Updated 5 ಅಕ್ಟೋಬರ್ 2017, 10:11 IST

ಗುಬ್ಬಿ: ‘ತಾಲ್ಲೂಕಿನ ಕಡಬ ಹೋಬಳಿ ಕೇಂದ್ರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಶಾಖೆಗೆ ವ್ಯವಸ್ಥಾಪಕರು ಇಲ್ಲದೆ ಗ್ರಾಹಕರಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ’ ಎಂದು ಆರೋಪಿಸಿ ಬುಧವಾರ ಸ್ಥಳೀಯರು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು.

ಬ್ಯಾಂಕ್‌ನಲ್ಲಿ ಆಡಳಿತ ನಡೆಸುವ ವ್ಯವಸ್ಥಾಪಕರು ಇಲ್ಲ. ಇದರಿಂದ ಗ್ರಾಮೀಣ ಭಾಗದ ರೈತರು ವ್ಯವಹರಿಸುವುದು ಕಷ್ಟವಾಗಿದೆಎಂದು ಬ್ಯಾಂಕ್ ಗೆ ಬಂದಿದ್ದ ಗ್ರಾಹಕರು ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ಧಗಂಗಮ್ಮ ಮಾತನಾಡಿ, ’ಇಲ್ಲಿನ ಸಮಸ್ಯೆ ಬಗ್ಗೆ ತುಮಕೂರಿನ ಎಜಿಎಂ ಅವರಿಗೆ ತಿಳಿಸಲಾಗಿದೆ. ಆದರೆ ಇದುವರೆಗೂ ವ್ಯವಸ್ಥಾಪಕರನ್ನು ನೇಮಕ ಮಾಡಿಲ್ಲ’ ಎಂದು ದೂರಿದರು.

ADVERTISEMENT

‘ಗುಬ್ಬಿ ತಾಲ್ಲೂಕು ಕೇಂದ್ರವಾಗುವ ಮೊದಲು, ಕಡಬ ತಾಲ್ಲೂಕು ಕೇಂದ್ರವಾಗಿತ್ತು. ಇಲ್ಲಿ ವ್ಯವಹಾರ ಮಾಡುವ ವರ್ತಕರು ಹೆಚ್ಚು ನೆಲೆಸಿದ್ದಾರೆ. ಅಡಿಕೆ, ತೆಂಗು ಹೊಂದಿದ ರೈತರು ಸಾಕಷ್ಟು ಇದ್ದು, ವಾಣಿಜ್ಯ ವ್ಯವಹಾರ ನಡೆಸಲು ಬ್ಯಾಂಕ್ ನಮಗೆ ಸಹಕಾರಿ ಆಗುತ್ತಿಲ್ಲ. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಧರ್ಮೇಗೌಡ ಮಾತನಾಡಿ, ’ಬ್ಯಾಂಕಿನಲ್ಲಿ ಆಭರಣದ ಮೇಲೆ ಸಾಲವನ್ನು ಮಾತ್ರ ನೀಡುತ್ತಾರೆ. ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಗ್ರಾಹಕರಾಗಿದ್ದು, ಸಕಾಲಕ್ಕೆ ಸೇವೆ ಸಿಗುವಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಕೂಡಲೇ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ದರ್ಶನ್‍ಗೌಡ, ಮುಖಂಡರಾದ ಈಶ್ವರ್, ಲಕ್ಷ್ಮಿನಾರಯಣಪ್ಪ, ಶಂಕರ್, ಚಿಕ್ಕತಿಮ್ಮಯ್ಯ, ವೆಂಕಟರಂಗಯ್ಯ, ರಾಜೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.