ADVERTISEMENT

ಸೌರಶಕ್ತಿಯೇ ಭವಿಷ್ಯ: ತಜ್ಞರ ಅಭಿಮತ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 9:27 IST
Last Updated 6 ಏಪ್ರಿಲ್ 2013, 9:27 IST

ತುಮಕೂರು: ದೇಶದಲ್ಲಿ ಭವಿಷ್ಯದ ದಿನಗಳಿಗೆ ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಹಾಗೂ ಸುಧಾರಣೆಗೆ 2,500 ಶತಕೋಟಿ ಡಾಲರ್ ಅಗತ್ಯವಿದೆ ಎಂದು ಎಂದು ಮೆಸ್ಕಾಂ ತಾಂತ್ರಿಕ ನಿರ್ದೇಶಕ ಡಾ.ಇ.ಡಬ್ಲ್ಯೂ.ಶಿವಕುಮಾರ್ ತಿಳಿಸಿದರು.

ನಗರದ ಎಸ್‌ಐಟಿಯಲ್ಲಿ  ನಾರಾಯಣಪುರ ಪವರ್ ಕಂಪೆನಿ ಆಶ್ರಯದಲ್ಲಿ ಶುಕ್ರವಾರ `ವಿದ್ಯುತ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಪ್ರಸ್ತುತ ಅವಕಾಶಗಳು' ಕುರಿತು ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದರು.

ವ್ಯಕ್ತಿಯೊಬ್ಬ ವಿದ್ಯುತ್ ಜಾಲದಿಂದ ವಿದ್ಯುತ್ ಕಳವು ಮಾಡಲು ಪ್ರಯತ್ನಿಸಿದಾಗ ಸ್ವಯಂ ಚಾಲಿತವಾಗಿ ಪತ್ತೆ ಹಚ್ಚುವ ಯಂತ್ರ ಹಾಗೂ ಸುಧಾರಿತ ಸೋಲಾರ್ ಪ್ಯಾನೆಲ್‌ಗಳತ್ತ ಚಿಂತಿಸಬೇಕು. ಇದಕ್ಕಿಂತ ಪ್ರಮುಖವಾಗಿ ವಿದ್ಯುತ್ ಕಳವು, ಸೋರಿಕೆ ತಡೆಗೆ ತ್ವರಿತ ಸಂಶೋಧನೆಯ ಅಗತ್ಯವಿದೆ ಎಂದು ಹೇಳಿದರು.

ಎಂಜಿನಿಯರುಗಳಲ್ಲಿನ ತಿಳಿವಳಿಕೆ ಕೊರತೆಯಿಂದ ವಿದ್ಯುತ್ ಸೋರಿಕೆ ಹೆಚ್ಚುತ್ತಿದೆ. ಈಗ ವಿದ್ಯುತ್ ಕ್ಷೇತ್ರದಲ್ಲಿ ಎದುರಾಗಿರುವ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಬೇಕು. ಈಗಿರುವ ತಂತ್ರಜ್ಞಾನದಿಂದಲೇ ಸರಿಯಾದ ಗುರಿ ಇಟ್ಟುಕೊಂಡು ಕಾರ್ಯನಿರ್ವಹಿಸಿದರೆ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್‌ಸ್ಟಿಟ್ಯೂಟ್‌ನ ಮಹಾ ನಿರ್ದೇಶಕ ಎನ್.ಮುರುಗೇಶನ್ ಮಾತನಾಡಿ, ಮುಂಬರುವ ದಿನಗಳಲ್ಲಿ ಪೆಟ್ರೋಲ್, ಡೀಸೆಲ್‌ಗೆ ಪರ್ಯಾಯವಾಗಿ ವಿದ್ಯುತ್ ಬಳಕೆ ಹೆಚ್ಚಲಿದೆ. ಆದರೆ ಪರಿಸರ ಸಂರಕ್ಷಣೆಗಾಗಿ ಸುಸ್ಥಿರ ಇಂಧನಗಳಾದ ವಾಯು, ಸೌರಶಕ್ತಿ ಬಳಕೆ ಹೆಚ್ಚಬೇಕು. ವಿದ್ಯುತ್ ಎಂಜಿನಿಯರ್ ವಿದ್ಯಾರ್ಥಿಗಳು ನೂತನ ಯೋಜನೆ, ಹೊಸ ಸಂಶೋಧನೆಗಳತ್ತ ಒಲವು ತೋರಿದಾಗ ದೇಶದ ವಿದ್ಯುತ್ ವಲಯ ಸುಧಾರಿಸುತ್ತದೆ ಎಂದರು.

ಡಾ.ಪಿ.ಎಸ್.ನಾಗೇಂದ್ರ ರಾವ್, ಡಾ.ತುಷಾರ್ ತೆರೆದೇಸಾಯಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಎಸ್‌ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ ಮಾತನಾಡಿದರು. ಪ್ರಾಂಶುಪಾಲ ಡಾ.ಶಿವಕುಮಾರಯ್ಯ, ಡೀನ್ ಪ್ರೊ.ಬಸವರಾಜಯ್ಯ ಹಾಜರಿದ್ದರು. ಡಾ.ಶಿವಪ್ರಸಾದ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.