ಗುಬ್ಬಿ: ಪಟ್ಟಣದ ಬಂಗ್ಲೊಪಾಳ್ಯದ ಆದಿ ದ್ರಾವಿಡ ಸಮುದಾಯದವರು ವಾಸಿಸುತ್ತಿರುವ ವಸತಿ ಬಡಾವಣೆ ಮಧ್ಯೆ ಮುಸ್ಲಿಂ ಸಮುದಾಯದವರು ಪರವಾನಗಿ ಪಡೆಯದೆ ಮದರಸ ಹಾಗೂ ಮಸೀದಿ ನಿರ್ಮಾಣ ಮಾಡಲು ಮುಂದಾಗಿದ್ದರು. ರಾತ್ರೋರಾತ್ರಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದನ್ನು ಸ್ಥಳೀಯರು ಪ್ರಶ್ನಿಸಿ ತಡೆಹಿಡಿದರು.
ಅಕ್ರಮ ಕಟ್ಟಡ ನಿರ್ಮಾಣ ಖಂಡಿಸಿ ಸ್ಥಳೀಯರು ತಾಲ್ಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದರು.
ಮಂಗಳವಾರ ಎರಡೂ ಸಮುದಾಯಗಳ ಮುಖಂಡರ ಜೊತೆ ತಹಶೀಲ್ದಾರ್ ಆರತಿ ಬಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಆದಿ ದ್ರಾವಿಡ ಸಮುದಾಯಕ್ಕೆ ಬಡಾವಣೆಯಲ್ಲಿ ನಿವೇಶನ ಹಂಚಲಾಗಿದೆ. ಈಗಾಗಲೇ ಅನೇಕರು ಮನೆ ಕಟ್ಟಿಕೊಂಡಿದ್ದಾರೆ. ಈ ಬಡಾವಣೆಯ ಸುತ್ತಮುತ್ತಲಿನಲ್ಲಿ ಮುಸ್ಲಿಮರು ವಾಸಮಾಡದೆ ಇದ್ದರೂ ಮದರಸ ಮತ್ತು ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕಟ್ಟಡ ನಿರ್ಮಿಸಲು ಪಿಲ್ಲರ್ ಹಾಕುವಾಗ ಅಕ್ಕಪಕ್ಕದ ಮನೆಗಳಿಗೆ ಹಾನಿ ಮಾಡಿದ್ದಾರೆ. ತಾಲ್ಲೂಕು ಆಡಳಿತ ಕ್ರಮ ಕೈಗೊಂಡು ತಡೆಹಿಡಿಯಬೇಕು ಎಂದು ಸಭೆಯಲ್ಲಿ ಸ್ಥಳೀಯರು ಒತ್ತಾಯಿಸಿದರು.
ಪರವಾನಗಿ ಪಡೆಯದೆ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ತಹಶೀಲ್ದಾರ್, ಮುಸ್ಲಿಂ ಸಮುದಾಯದ ಮುಖಂಡರನ್ನು ಪ್ರಶ್ನಿಸಿದರು. ಅಕ್ರಮವಾಗಿ ಕಟ್ಟಡ ಕಟ್ಟಲು ಮುಂದಾದಲ್ಲಿ ಕ್ರಮ ಕೈಗೊಳ್ಳಲಾಗುವುದು. ಗೊಂದಲಕ್ಕೆ ಆಸ್ಪದ ನೀಡದೇ ಸಮಸ್ಯೆ ಬಗೆಹರಿಯುವವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದ ನಂತರ ಮುಂದಿನ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾ ದೇವಿ, ಮೊಹಮ್ಮದ್ ಸಾದಿಕ್, ಶೌಕತ್ ಆಲಿ, ಶ್ವೇತಾ, ಸುನಿಲ್ ಕುಮಾರ್, ಜಿ.ಎಚ್ ಜಗನ್ನಾಥ್, ಪರಿಶಿಷ್ಟ ಸಮುದಾಯದ ಮುಖಂಡರು ಹಾಗೂ ಮುಸ್ಲಿಂ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.