ಶಿರಾ: ತಾಲ್ಲೂಕಿಗೆ ಎತ್ತಿನಹೊಳೆ ನೀರಾವರಿ ಯೋಜನೆ ಮೂಲಕ ದೊರೆಯುವ ನೀರನ್ನು ದೊಡ್ಡ ಕೆರೆಗಳಿಗೆ ಹರಿಸಿ ಅಲ್ಲಿ ನೀರನ್ನು ಸಂಗ್ರಹಿಸಿ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ₹500 ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ತಾಲ್ಲೂಕಿನ ಗೌಡಗೆರೆ ಗ್ರಾಮದಲ್ಲಿ ನೂತನ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ತಾಲೂಕಿನಲ್ಲಿ ಈಗಾಗಲೇ 145 ಕುಡಿಯುವ ನೀರಿನ ಟ್ಯಾಂಕ್ಗಳಿದ್ದು, ಇನ್ನು 265 ಟ್ಯಾಂಕ್ಗಳನ್ನು ನಿರ್ಮಾಣ ಮಾಡಿ ಸುಲಭವಾಗಿ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ₹500 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರ ಕ್ರಿಯಾ ಯೋಜನೆಗೆ ಅನುಮತಿ ದೊರೆಯಲಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಆರ್.ಶಶಿಧರ್ ಗೌಡ ಮಾತನಾಡಿ, ಗೌಡಗೆರೆ ವ್ಯಾಪ್ತಿಯ ಹಲವು ಕೆರೆಗಳು ನೀರಾವರಿ ಸೌಲಭ್ಯದಿಂದ ವಂಚಿತವಾಗಿವೆ. ಭದ್ರ ಮೇಲ್ದಂಡೆ ಯೋಜನೆಯಲ್ಲಿ ಗೌಡಗೆರೆ ಸೇರಿ ಇತರ ಕೆರೆಗಳನ್ನು ಸೇರ್ಪಡೆ ಮಾಡುವ ಕೆಲಸವನ್ನು ಶಾಸಕ ಟಿ.ಬಿ.ಜಯಚಂದ್ರ ಮಾಡಬೇಕು ಎಂದರು.
ತಾಲೂಕು ಪಂಚಾಯಿತಿ ಇಒ ಹರೀಶ್ ಮಾತನಾಡಿ, ನರೇಗಾ ಯೋಜನೆಯಲ್ಲಿ ರೈತರಿಗೆ ಅನುಕೂಲವಾಗುವ ಹಾಗೂ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗುವ ಕಾಮಗಾರಿಗಳನ್ನು ರೈತರು ಮತ್ತು ಜನಸಾಮಾನ್ಯರು ಕೈಗೊಳ್ಳುವ ಮೂಲಕ ಪ್ರಗತಿ ಸಾಧಿಸುವುದರ ಜತೆಗೆ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದರು.
ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಗೌಡಪ್ಪ, ಉಪಾಧ್ಯಕ್ಷೆ ಮಂಜುಳಾ ಗೌಡ, ಸದಸ್ಯರಾದ ಪುಷ್ಪಾ, ರಮಾಮಣಿ, ಡಿ.ತಿಪ್ಪೇಸ್ವಾಮಿ, ಕೆ.ಶಾಂತರಾಜು, ಕರಿಯಣ್ಣ, ಪಾರ್ವತಮ್ಮ, ಗಿರಿಜಮ್ಮ, ವಿವೇಕಾನಂದ, ಎಚ್.ಹನುಮಂತರಾಜು, ಪುಟ್ಟಮ್ಮ, ಮಮತಾ, ಟಿ.ಸುಮಲತಾ, ಸಿ.ಈಶ್ವರಪ್ಪ ಎನ್.ರಾಘವೇಂದ್ರ, ಗುಂಡಣ್ಣ, ಪಿಡಿಒ ಕೆ.ವೆಂಕಟೇಶಮೂರ್ತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.