ಪಾವಗಡ: ಪಟ್ಟಣದ ಹಲವೆಡೆ ಕಳಪೆ ಕಾಮಗಾರಿ ಮಾಡಲಾಗಿದೆ. ಕೆಲವು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಇದೆ. ಅಧಿಕಾರಿಗಳಿಗೆ ತಿಳಿಸಿದರೂ ಸಮಸ್ಯೆ ಬಗೆಹರಿಸದೆ ನಿರ್ಲಕ್ಷ್ಯವಹಿಸಲಾಗುತ್ತಿದೆ ಎಂದು ಸದಸ್ಯರು ಆರೋಪಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ನಾಮ ನಿರ್ದೇಶಿತ ಸದಸ್ಯರು ಮತ್ತು ಮುಖ್ಯಾಧಿಕಾರಿ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಮುಖ್ಯಾಧಿಕಾರಿ ಅವರು ವಾಟ್ಸ್ಆ್ಯಪ್ನಲ್ಲಿ ಬೇಕಾಬಿಟ್ಟಿಯಾಗಿ ಪ್ರತಿಕ್ರಿಯೆ ನೀಡುತ್ತಾರೆ. ಸದಸ್ಯರಿಗೆ ಗೌರವ ನೀಡುವುದಿಲ್ಲ. ಖರ್ಚು, ಕಾಮಗಾರಿ ಇತ್ಯಾದಿ ಬಗ್ಗೆ ಕೇಳಿದರೂ ಸಮರ್ಪಕವಾಗಿ ಉತ್ತರ ನೀಡುವುದಿಲ್ಲ ಎಂದು ನಾಮ ನಿರ್ದೇಶಿತ ಸದಸ್ಯರಾದ ಲೋಕೇಶ್ ದೇವರಾಜು, ಪ್ರಸನ್ನ, ರವಿ, ಶೇಖರ್ ಬಾಬು, ಮಂಜುನಾಥ್ ಆರೋಪಿಸಿದರು.
ಬಡಾವಣೆಗಳಲ್ಲಿ ಸಮರ್ಪಕವಾಗಿ ಅಭಿವೃದ್ಧಿ ಕಾರ್ಯ ಮಾಡುವಲ್ಲಿ ವಿಫಲ ರಾಗಿದ್ದಾರೆ. ಸರಿಯಾಗಿ ಮೇಲ್ವಿಚಾರಣೆ ಮಾಡದ ಕಾರಣ ಬಹುತೇಕ ಕಾಮಗಾರಿಗಳು ಕಳಪೆಯಿಂದ ಕೂಡಿವೆ ಎಂದು ದೂರಿದರು.
ನಾಮಿನಿ ಸದಸ್ಯರಿಗೆ ಪುರಸಭೆಯ ಯಾವುದೇ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಲಾಗುತ್ತಿದೆ. ಜನಸಾಮಾನ್ಯರ ಸಮಸ್ಯೆ ಕುರಿತು ಮಾತನಾಡಲು ಹೋದರೆ ಅವರಿಗಿಷ್ಟ ಬಂದಂತೆ ಮಾತನಾಡುತ್ತಿದ್ದಾರೆ. ಸಾರ್ವಜನಿಕರಿಗೆ ಮಾಹಿತಿ ನೀಡದೆ ಗೋಪ್ಯತೆ ಕಾಪಾಡುತ್ತಿ ರುವುದು ವಿಪರ್ಯಾಸ ಎಂದುದರು.
ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ, ಕಾನೂನು ಪ್ರಕಾರ ಕೆಲಸ ಮಾಡಲಾಗುತ್ತಿದೆ ಸಭೆಗೆ ತಿಳಿಸಿದರು.
ಅಧ್ಯಕ್ಷ ವೇಲುರಾಜು ಅವರು, ಬುಧವಾರದಿಂದಲೇ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವುದಾಗಿ ತಿಳಿಸಿದ ಬಳಿಕ ಚರ್ಚೆಗೆ ತೆರೆ ಬಿದ್ದಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.