ತುಮಕೂರು: ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಶೇ 1ಕ್ಕೆ ಏರಿಕೆ ಮಾಡಿದ್ದು, ತಕ್ಷಣ ರದ್ದುಪಡಿಸಿ ಶುಲ್ಕ ರಹಿತವಾಗಿ ವಾಹಿವಾಟು ನಡೆಸಲು ಅವಕಾಶ ನೀಡುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಉದ್ಯಮಿಗಳ ಒತ್ತಾಯಕ್ಕೆ ಮಣಿದು ರಾಜ್ಯ ಸರ್ಕಾರವು ಮಾರುಕಟ್ಟೆ ಶುಲ್ಕವನ್ನು ಶೇ 1ರಿಂದ ಶೇ 0.35ಕ್ಕೆ ಕಳೆದ ಜುಲೈನಲ್ಲಿ ಇಳಿಕೆ ಮಾಡಿತ್ತು. ನಮ್ಮ ಹಿಂದಿನ ಒತ್ತಾಯದಂತೆ ಶುಲ್ಕವನ್ನು ಸಂಪೂರ್ಣವಾಗಿ ತೆಗೆದುಹಾಕದೆ ಮತ್ತೆ ಏರಿಕೆ ಮಾಡಲಾಗಿದೆ. ಇದು ವರ್ತಕರಿಗೆ ಆಘಾತವನ್ನು ಉಂಟುಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಪಿಎಂಸಿ ಹೊರಗೆ ಯಾವುದೇ ಶುಲ್ಕ ವಿಧಿಸದೆ ರೈತರೊಂದಿಗೆ ವ್ಯವಹರಿಸಲು ಅವಕಾಶ ನೀಡಲಾಗಿದೆ. ಆದರೆ ಎಪಿಎಂಸಿಯಲ್ಲಿ ವಹಿವಾಟು ನಡೆಸುವ ವರ್ತಕರು ಶೇ 1ರಷ್ಟು ಶುಲ್ಕ ನೀಡುವ ಮೂಲಕ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಎಪಿಎಂಸಿಗಳು ಸಂಪೂರ್ಣವಾಗಿ ಮುಚ್ಚಿಹೋಗಿ, ವರ್ತಕರು ಬೀದಿಪಾಲಾಗಲಿದ್ದಾರೆ. ಹಾಗಾಗಿ ಶುಲ್ಕ ರಹಿತವಾಗಿ ವಹಿವಾಟು ನಡೆಸುವ ವಾತಾವರಣ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.