ಬಿಜೆಪಿ, ಕಾಂಗ್ರೆಸ್
ಕುಣಿಗಲ್: ‘ಲಿಂಕ್ ಕೆನಾಲ್ಗೆ ತಾಲ್ಲೂಕು ಬಿಜೆಪಿ ವಿರೋಧವಿಲ್ಲ, ಪರವಾಗಿದೆ. ಆದರೆ ಹೇಮಾವತಿ ನೀರನ್ನು ಮಾಗಡಿಗೆ ತೆಗೆದುಕೊಂಡು ಹೋಗದಿರುವ ಬಗ್ಗೆ ಸರ್ಕಾರದಿಂದ ಆದೇಶ ಹೊರಡಿಸಿ’ ಎಂದು ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಆಗ್ರಹಿಸಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಕ್ ಕೆನಾಲ್ಗೆ ತಾಲ್ಲೂಕು ಬಿಜೆಪಿ ಮುಖಂಡರ ವಿರೋಧವಿದೆ ಎಂದು ಶಾಸಕ ಡಾ.ರಂಗನಾಥ್ ಆರೋಪಿಸುತ್ತಿದ್ದಾರೆ. ಒಂದೆಡೆ ಹೇಮಾವತಿ ನೀರು ಕುಣಿಗಲ್ ತಾಲ್ಲೂಕಿಗೆ ಮಾತ್ರ ಎಂದು ಹೇಳುವ ಶಾಸಕ ಮತ್ತೊಂದೆಡೆ ಹೆಚ್ಚು ನೀರು ಬಂದಾಗ ಮಾಗಡಿಗೆ ಹರಿಸುವುದರಲ್ಲಿ ತಪ್ಪೇನು? ಎಂದು ಹೇಳಿ ಗೊಂದಲ ಸೃಷ್ಟಿಸಿದ್ದಾರೆ ಎಂದರು.
ಲಿಂಕ್ ಕೆನಾಲ್ ಯೋಜನೆಗೆ ₹615 ಕೋಟಿ ಮಂಜೂರಾತಿ ನೀಡಿದ್ದು, ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಆದರೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಡಾ.ರಂಗನಾಥ್ ಅವರ ಸಾಧನೆ ಅದರ ವೆಚ್ಚವನ್ನು ₹990 ಕೋಟಿಗೆ ಏರಿಸಿದ್ದಷ್ಟೆ ಎಂದು ಟೀಕಿಸಿದರು.
ಶಾಸಕ ರಂಗನಾಥ್ ಅಧಿಕಾರಕ್ಕೇರಿ 8ನೇ ವರ್ಷವಾಗಿದೆ. ಮೂಲ ಯೋಜನೆಯಂತೆ 240 ಕಿಮೀ ವರೆಗೆ ನಾಲಾ ಕಾಮಗಾರಿ ಪೂರ್ಣಗೊಳಿಸಿ ಹೇಮಾವತಿ ನೀರು ಹರಿಸಲು ಪ್ರಯತ್ನವೇ ಪಟ್ಟಿಲ್ಲ. ನಾಲೆಗಾಗಿ ಭೂಮಿ ನೀಡಿದ ತಾಲ್ಲೂಕಿನ ರೈತರಿಗೆ ಪರಿಹಾರ ಸಹ ವಿತರಿಸಲು ಕ್ರಮ ಕೈಗೊಂಡಿಲ್ಲ. ಕುಣಿಗಲ್ ದೊಡ್ಡಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸದೆ ಕಾಲಹರಣ ಮಾಡಿ ಕೋಟ್ಯಂತರ ರೂಪಾಯಿ ಹೊಸ ಕಾಮಗಾರಿಗಳಿಗೆ ಗಮನ ಹರಿಸಿದ್ದಾರೆ ಎಂದು ದೂರಿದರು.
ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ನಿರಂತರ ಕಳ್ಳತನ ಪ್ರಕರಣಗಳು ನಡೆಯುತ್ತಿದೆ ಎಂದರು.
ಕುಣಿಗಲ್ ಪಾಲಿನ ನೀರಿಗೆ ಜಿಲ್ಲೆಯ ರಾಜಕೀಯ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿಲ್ಲ. ಪರೋಕ್ಷವಾಗಿ ಮಾಗಡಿಗೆ ತೆಗೆದುಕೊಂಡು ಹೋಗುವ ಹುನ್ನಾರಕ್ಕೆ ವಿರೋಧವಿದೆ. ಶಾಸಕರು ತಮ್ಮ ಸಂಬಂಧಿ ಜಲಸಂಪನ್ಮೂಲ ಸಚಿವರ ಪರ ಕಾರ್ಯನಿರ್ವಹಿಸುತ್ತಿದ್ದಾರೆಯೇ ಹೊರತು ತಾಲ್ಲೂಕಿನ ಜನರ ಪರವಾಗಿಲ್ಲ. ಸೌಜನ್ಯಕ್ಕಾಗಿಯಾದರೂ ತಾಲ್ಲೂಕಿನ ಬಿಜೆಪಿ, ಜೆಡಿಎಸ್ , ರೈತಪರ ಸಂಘಟನೆಗಳೊಂದಿಗೆ ಚರ್ಚೆ ನಡೆಸದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಮಾಗಡಿಗೆ ಅನುಕೂಲ ಮಾಡಲು ಹೊರಟ್ಟಿದ್ದಾರೆ ಎಂದು ದೂರಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ದಿನೇಶ್ ಕುಮಾರ್, ಬಿಜೆಪಿ ಯುವ ಘಟಕದ ಅಧ್ಯಕ್ಷ ಅಮರನಾಥ್ ಶೆಟ್ಟಿ, ತಿಮ್ಮೆಗೌಡ, ಶಿವರಾಮಯ್ಯ, ಅನಂದ್ ಕಾಂಬ್ಳಿ. ಸುರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.