ತುಮಕೂರು: ಬ್ರಾಹ್ಮಣರು ಸ್ವಾವಲಂಬಿಗಳು. ಸಮಾಜವನ್ನು ಕಟ್ಟಿದವರು. ಸಮಾಜಕ್ಕೆ ಅವರ ಕೊಡುಗೆ ಅಪಾರವಾದುದು ಎಂದು ಸಮಾಜದ ಮುಖಂಡರಾದ ಎಚ್.ಜಿ.ಚಂದ್ರಶೇಖರ್ ನುಡಿದರು.
ನಗರದಲ್ಲಿ ನಡೆದ ವಿಪ್ರ ಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಾವಲಂಬನೆಗೆ ಸ್ವಯಂ ಸ್ಫೂರ್ತಿಗೆ ಸಂಕಲ್ಪಕ್ಕೆ ಹೆಸರಾದವರು ಬ್ರಾಹ್ಮಣರು ಎಂದರು.
ಭವನ ನಿರ್ಮಿಸಲು ನಿವೇಶನ ದಾನ ನೀಡಿದ ಲೆಕ್ಕ ಪರಿಶೋಧಕ ನರಸಿಂಹಮೂರ್ತಿ, ‘ತ್ರಿಮತಸ್ಥ ಬ್ರಾಹ್ಮಣರು ಒಂದಾಗಿ ಪ್ರಪಂಚಕ್ಕೆ ಮಾದರಿ ಆಗಬೇಕು. ನಾನು ಇಂದು ಸಂಪಾದಿಸಿದ ಹೆಸರು ಕೀರ್ತಿ ಎಲ್ಲವೂ ನನ್ನ ತಂದೆ ತಾಯಿಯರಿಗೆ ಸಲ್ಲುತ್ತದೆ’ ಎಂದು ತಿಳಿಸಿದರು.
ಉದ್ಯಮಿ ಡಿ.ಆರ್.ಸುಬ್ರಮಣ್ಯ ಎಂ.ಡಿ.ಪೀಟ್ವೆಲ್, ಬ್ರಾಹ್ಮಣರಿಗೆ ಧೀ ಶಕ್ತಿಯು ಪೂರ್ವಜರಿಂದ ಬಂದಿದೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವೆಂಕಟ್ ನಾರಾಯಣ, ಬ್ರಾಹ್ಮಣರು ಸಹಜವಾಗಿಯೇ ಸರಳ ಜೀವಿಗಳು. ಎಂದಿಗೂ ಆಡಂಬರದ ಜೀವನ ನಡೆಸಿದವರಲ್ಲ ಎಂದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎನ್.ಆರ್.ನಾಗರಾಜ್ರಾವ್, ಶಾಸಕ ಬಿ.ಸಿ.ನಾಗೇಶ್ ಮಾತನಾಡಿದರು. ಭವನ ನಿರ್ಮಿಸಲು ಸಹಾಯ ಮಾಡಿದ ಸಿ.ವಿ.ಕೇಶವಮೂರ್ತಿ, ಕೆ.ಹಿರಿಯಣ್ಣ, ಸಿ.ಎನ್.ರಮೇಶ್, ಇಂದುಮತಿ ಶ್ರೀನಿವಾಸ್, ಕೃಷ್ಣಮೂರ್ತಿ, ಭಾರದ್ವಾಜ್ ಅನಂತ್ರಾಮಯ್ಯ, ಡಾ.ಮುರಳೀಧರ್, ಸಿ.ಎ. ವಾಸುದೇವ್ ಅವರನ್ನು ಸನ್ಮಾನಿಸಲಾಯಿತು.
ಶಾಸಕರಾದ ಜ್ಯೋತಿ ಗಣೇಶ್, ಟಿ.ಕೆ.ರಾಘವೇಂದ್ರ, ಕೆ.ನಾಗಭೂಷಣ್ ಹಾಗೂ ಜಯಸಿಂಹರಾವ್, ಪ್ರೊ.ಟಿ.ಎನ್. ಪ್ರಭಾಕರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.