ADVERTISEMENT

ಕೊರೊನಾ ಕಲಿಸಿತು ಹಲವು ಪಾಠ

ಶಾಂಪೂರ್ ಭಗೀರಥಮ್ಮ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 15:12 IST
Last Updated 12 ಸೆಪ್ಟೆಂಬರ್ 2020, 15:12 IST
ಶಾಂಪೂರ್ ಭಗೀರಥಮ್ಮ ದತ್ತಿ ಪ್ರಶಸ್ತಿ ಸ್ವೀಕೃತರೊಂದಿಗೆ ಜಿಲ್ಲಾ ಕಸಾಪ ಪದಾಧಿಕಾರಿಗಳು
ಶಾಂಪೂರ್ ಭಗೀರಥಮ್ಮ ದತ್ತಿ ಪ್ರಶಸ್ತಿ ಸ್ವೀಕೃತರೊಂದಿಗೆ ಜಿಲ್ಲಾ ಕಸಾಪ ಪದಾಧಿಕಾರಿಗಳು   

ತುಮಕೂರು: ‘ಜೀವನಾನುಭವ ನಮಗೆ ಹಲವು ಪಾಠಗಳನ್ನು ಕಲಿಸುತ್ತದೆ. ಅದೇ ರೀತಿಯಲ್ಲಿ ಕೊರೊನಾ ಸಹ ಹಲವು ಪಾಠಗಳನ್ನು ಕಲಿಸಿದೆ’ ಎಂದು ಸಾಹಿತಿ ಡಾ.ಎಸ್.ಪಿ.ಪದ್ಮಪ್ರಸಾದ್ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಂಪೂರ್ ಭಗೀರಥಮ್ಮ ದತ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಕನ್ನಡ ಸಾಹಿತ್ಯದಲ್ಲಿ ಪ್ರವಾಸ ಕಥನಗಳನ್ನು ಬರೆದವರ ಸಂಖ್ಯೆ ಕಡಿಮೆ. ಡಾ.ಲತಾ ಗುತ್ತಿ ಅವರು ಐದು ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಅವರನ್ನು ಬಿಟ್ಟರೆ ಬೇರೆ ಯಾರೂ ಕೂಡ ಇಷ್ಟೊಂದು ಪ್ರವಾಸ ಕಥನಗಳನ್ನು ಬರೆದಿಲ್ಲ ಎಂದರು.

ADVERTISEMENT

‘ಪ್ರವಾಸಕ್ಕೆ ಹೋಗಿ ಬಂದರೆ ಎಷ್ಟೆಲ್ಲಾ ಅನುಭವಗಳು ದೊರೆಯುತ್ತವೆ ಎಂಬುದಕ್ಕೆ ಈ ಪ್ರವಾಸ ಕಥನಗಳೇ ಸಾಕ್ಷಿ. ನಾನು ಕೂಡ ಈಗಾಗಲೇ ಎರಡು ಪ್ರವಾಸ ಕಥನಗಳನ್ನು ಬರೆದಿದ್ದೇನೆ. ಇನ್ನೂ ಮೂರು ಪ್ರವಾಸ ಕಥನಗಳು ಹೊರಬರಲಿವೆ’ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ‘ಪ್ರೊ.ಎಚ್.ಆರ್.ದೇವ ಪ್ರಕಾಶ್ ಮತ್ತು ಶಾಲಿನಿ ಅವರು ಶಾಂಪೂರ್ ಭಾಗೀರಥಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡುತ್ತಿದ್ದೇವೆ. ಜಿಲ್ಲೆಯವರಿಗೆ ನೀಡಬೇಕು ಎಂಬ ಷರತ್ತು ವಿಧಿಸಿರುವುದರಿಂದ ಜಿಲ್ಲೆಯ ಲೇಖಕರಿಗೆ ಪ್ರಶಸ್ತಿಗಳು ದೊರೆಯುತ್ತಿವೆ’ ಎಂದರು.

ಡಾ.ಎಚ್.ಆರ್.ದೇವಪ್ರಕಾಶ್, ಶಾಲಿನಿ, ಸಾಹಿತಿ ರೇಣುಕ ಪ್ರಸಾದ್ ಇದ್ದರು. ಕಸಾಪ ಕೋಶಾಧ್ಯಕ್ಷ ಬಿ.ಮರುಳಯ್ಯ ಸ್ವಾಗತಿಸಿದರು. ಲೇಖಕಿ ಬಿ.ಸಿ.ಶೈಲಾ ನಾಗರಾಜ್ ನಿರೂಪಿಸಿದರು. ಲೇಖಕ ಕೆ.ಪಿ.ಲಕ್ಷ್ಮಿಕಾಂತರಾಜೇ ಅರಸ್ ವಂದಿಸಿದರು.

ಪ್ರಶಸ್ತಿ ಪುರಸ್ಕೃತರು

ಡಾ.ಎಸ್.ಪಿ.ಪದ್ಮಪ್ರಸಾದ್ ಅವರ ಪ್ರವಾಸಿ ಕೃತಿ ‘ಕಂಡಷ್ಟೇ ಚೀನಾ’, ವಿದ್ಯಾ ಅರಮನೆ ಅವರ ‘ಅರಳುವ ಹೂ’ಗಳು ಮಕ್ಕಳ ಸಾಹಿತ್ಯ ಕೃತಿಗೆ, ವ್ಯಂಗ್ಯಚಿತ್ರಕ್ಕಾಗಿ ಚಿನ್ನೇನಹಳ್ಳಿ ಶಿವರಾಜ್ ಅವರಿಗೆ ಪ್ರಶಸ್ತಿ ನೀಡಲಾಯಿತು. ₹2 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.