ADVERTISEMENT

ಡ್ರಗ್ಸ್‌ನಿಂದ ಜೀವಹಾನಿ: ನ್ಯಾಯಾಧೀಶ ವಿಷಾದ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 1:49 IST
Last Updated 30 ಸೆಪ್ಟೆಂಬರ್ 2020, 1:49 IST
ತುಮಕೂರಿನಲ್ಲಿ ನಡೆದ ನಶಾಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ರಾಘವೇಂದ್ರ ಶೆಟ್ಟಿಗಾರ್, ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಡಿವೈಎಸ್‌ಪಿ ಸೂರ್ಯನಾರಾಯಣರಾವ್ ಪಾಲ್ಗೊಂಡಿದ್ದರು
ತುಮಕೂರಿನಲ್ಲಿ ನಡೆದ ನಶಾಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ರಾಘವೇಂದ್ರ ಶೆಟ್ಟಿಗಾರ್, ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಡಿವೈಎಸ್‌ಪಿ ಸೂರ್ಯನಾರಾಯಣರಾವ್ ಪಾಲ್ಗೊಂಡಿದ್ದರು   

ತುಮಕೂರು: ಕ್ಷಣಿಕ ಸುಖಕ್ಕಾಗಿ ಹಣ ಕೊಟ್ಟು ಡ್ರಗ್ಸ್ ತೆಗೆದುಕೊಳ್ಳಲಾಗುತ್ತಿದೆ. ಎಷ್ಟೇ ಹಣಕೊಟ್ಟರೂ ಮರಳಿ ಬಾರದ ಜೀವವನ್ನೇ ಬಲಿ ಕೊಡುತ್ತಿದ್ದಾರೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶರಾದ ರಾಘವೇಂದ್ರ ಶೆಟ್ಟಿಗಾರ್ ಇಲ್ಲಿ ಮಂಗಳವಾರ ವಿಷಾದಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿಜಯಕರ್ನಾಟಕ ಸಂಘಟನೆ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳು– ಕಾನೂನು ಅರಿವು ಕುರಿತ ‘ನಶಾಮುಕ್ತ ಕರ್ನಾಟಕ ಅಭಿಯಾನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಎಷ್ಟೇ ಜಾಗೃತಿ ಮೂಡಿದರೂ ಮನಸ್ಸು ವ್ಯಸನಮುಕ್ತವಾಗದ ಹೊರತು ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಕಳೆದ ಕೆಲ ದಿನಗಳಿಂದ ಮಾಧ್ಯಮಗಳಲ್ಲಿ ಡ್ರಗ್ಸ್ ಬಗ್ಗೆಯೇ ಚರ್ಚೆ ನಡೆದಿದೆ ಎಂದರು.

ADVERTISEMENT

ಎನ್‍ಡಿಪಿಎಸ್ ಕಾನೂನು ಕಠಿಣವಾಗಿದ್ದರೂ ಅದನ್ನು ಪಾಲನೆ ಮಾಡುತ್ತಿಲ್ಲ. ಪ್ರಭಾವಕ್ಕೆ ಒಳಗಾಗಿ ಕೆಲ ರೈತರು ತಮ್ಮ ಜಮೀನಿನಲ್ಲಿ ಬೆಳೆಗಳ ಮಧ್ಯೆ ಗಾಂಜಾ ಬೆಳೆದು ಅಪರಾಧಕ್ಕೆ ಸಿಲುಕುತ್ತಿದ್ದಾರೆ. ಡ್ರಗ್ಸ್ ಶೇಖರಣೆ, ಮಾರಾಟ, ಸೇವನೆ, ಸರಬರಾಜು– ಇವೆಲ್ಲವೂ ಕಾನೂನಿನಡಿ ಜಾಮೀನು ಸಿಗದಂತಹ ಅಪರಾಧ ಪ್ರಕರಣಗಳಾಗಿವೆ. ಇದರಿಂದ ಕಠಿಣ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ಎಚ್ಚರಿಸಿದರು.

ಸಾನ್ನಿಧ್ಯ ವಹಿಸಿದ್ದಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ‘ಟಿ.ವಿ ಮಾಧ್ಯಮಗಳು ಜ್ಯೋತಿಷರನ್ನು ಗುರೂಜಿಗಳೆಂದು ಬಿಂಬಿಸುತ್ತಿದ್ದು, ನಿಜವಾದ ಗುರುಗಳು ಜ್ಯೋತಿಷ ಗುರುಗಳಿಂದ ಹಿಂದಿದ್ದಾರೆ. ಈ ಗುರುಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಎಲ್ಲರನ್ನೂ ಆಕ್ರಮಿಸಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.

ಡಿವೈಎಸ್‌ಪಿ ಸೂರ್ಯನಾರಾಯಣರಾವ್ ‘ಮಾದಕ ವಸ್ತುಗಳು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ ವ್ಯಸನಿಗಳನ್ನಾಗಿ ಪರಿವರ್ತಿಸುತ್ತಿವೆ. ಮಾದಕ ವಸ್ತು ಪಡೆದುಕೊಳ್ಳಲು ಕಾನೂನುಬಾಹಿರ ಮಾರ್ಗವನ್ನು ಹಿಡಿಯುವಂತೆ ಮಾಡುತ್ತದೆ’ ಎಂದರು.

ರಾಷ್ಟ್ರಪತಿ ಪೊಲೀಸ್ ಪದಕ ಪಡೆದಿರುವ ಎಎಸ್‍ಐ ರಾಮಾಂಜಿನಯ್ಯ ಅವರನ್ನು ಗೌರವಿಸಲಾಯಿತು. ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಬಿ.ಎನ್.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಮುಖಂಡರಾದ ಎಚ್.ರಾಮಚಂದ್ರಯ್ಯ, ಮುನಿಸ್ವಾಮಿ, ಕೆ.ಅರುಣ್‍ಕುಮಾರ್ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.