ಕೊಡಿಗೇನಹಳ್ಳಿ: ಹೋಬಳಿಯಲ್ಲಿನ ಗುಟ್ಟೆ ಗ್ರಾಮದ ಆಂಜನೇಯ ಹೂವಿನ ರಥೋತ್ಸವ ಶನಿವಾರ ರಾತ್ರಿ ವೈಭವಯುತವಾಗಿ ನಡೆಯಿತು.
ಜಿಲ್ಲೆ ಹಾಗೂ ನೆರೆಯ ಆಂಧ್ರದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಸಿಡಿಮದ್ದುಗಳ ಪ್ರದರ್ಶನ, ಕಲಾ ತಂಡಗಳ ಮೆರವಣಿಗೆ ಉತ್ಸವಕ್ಕೆ ವಿಶೇಷ ಮೆರುಗು ತಂದಿತು. ರಥೋತ್ಸವದ ಅಂಗವಾಗಿ ದೇವಸ್ಥಾನ ಹಾಗೂ ರಥ ಸಾಗುವ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಶನಿವಾರ ಮಧ್ಯರಾತ್ರಿ 1 ಗಂಟೆಗೆ ಅಲಂಕೃತಗೊಂಡ ದೇವರನ್ನು ಮೆರವಣಿಗೆಯಲ್ಲಿ ತೇರಿನ ಬಳಿ ಕರೆದೊಯ್ಯಲಾಯಿತು. ಈ ವೇಳೆ ಭಕ್ತರು ಪ್ರತಿ ಮೆಟ್ಟಿಲ ಬಳಿ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ದೇವರನ್ನು ತೇರಿನಲ್ಲಿ ಕೂರಿಸಿ, ಮಹಾಮಂಗಳಾರತಿ ನೆರವೇರಿಸಿದ ನಂತರ ಬೀದಿಯಲ್ಲಿ ಹೂವಿನ ತೇರನ್ನು ಎಳೆಯಲಾಯಿತು.
ಭಾನುವಾರ ಬೆಳಗ್ಗೆಯೂ ತೇರನ್ನು ಮತ್ತೊಮ್ಮೆ ಎಳೆಯಲಾಯಿತು. ಮಧ್ಯಾಹ್ನ ಮತ್ತೆ ತೇರು ನಿಗದಿತ ಸ್ಥಳಕ್ಕೆ ವಾಪಸ್ಸಾಗುವುದರೊಂದಿಗೆ ಉತ್ಸವಕ್ಕೆ ತೆರೆ ಬಿದ್ದಿತು. ರಥೋತ್ಸವದ ಅಂಗವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವಿಶೇಷವಾಗಿ ಮಲ್ಲಿಗೆ ಹೂಗಳಿಂದ ಸಿಂಗರಿಸಿದ ತೇರಿನಲ್ಲಿ ಆಂಜನೇಯ ಮೆರವಣಿಗೆ ನಡೆಸುವುದು ವೈಶಿಷ್ಟ್ಯವಾಗಿದೆ.
ಜಿ.ಎಚ್. ನಾಗರಾಜರಾವ್, ಎಸ್.ನಂಜುಂಡಪ್ಪ, ಹನುಮಂತರಾಯಪ್ಪ, ಗೋವಿಂದಪ್ಪ, ಜಿ.ಆರ್. ಚೆನ್ನವೀರಯ್ಯ, ಎಚ್.ಅಶ್ವತ್ಥಪ್ಪ, ಪಿ.ನಾರಾಯಣಪ್ಪ, ಗುಂ. ಗಂಗಾಧರಪ್ಪ, ಶ್ರೀರಂಗನಾಯಕ, ಮಾರುತಿ, ರಾಮಕೃಷ್ಣಪ್ಪ, ನರಸಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.