ತುಮಕೂರು: ಇಡೀ ದೇಶದಲ್ಲಿಯೇ ಹೆಚ್ಚಿನ ಉದ್ಯೋಗಾವಕಾಶ ನೀಡುತ್ತಿರುವ ಕ್ಷೇತ್ರ ಕೈಮಗ್ಗ ಕ್ಷೇತ್ರವಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ಸಿ.ಎಸ್.ಯೋಗೇಶ್ ಹೇಳಿದರು.
ಜಿಲ್ಲಾ ಪಂಚಾಯಿತಿ, ಕೈಮಗ್ಗ ಮತ್ತು ಜವಳಿ ಇಲಾಖೆಯು ನಗರದ ಆರ್ಯ ಭಾರತಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ಧ 5ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ಇಲಾಖಾ ಯೋಜನೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
‘ನೂತನ ಜವಳಿ ನೀತಿ ಯೋಜನೆಯಡಿ ಯಾವುದೇ ಜವಳಿ ಕ್ಷೇತ್ರಕ್ಕೆ ತಾವು ಬಂಡವಾಳ ಹೂಡಿದರೆ ಸರ್ಕಾರದಿಂದ ಶೇ 30ರಷ್ಟು ಸಹಾಯಧನ ನೀಡಲಾಗುತ್ತದೆ. ಪರಿಶಿಷ್ಟ ಜಾತಿ, ಪಂಗಡದವರನ್ನು ಪ್ರೋತ್ಸಾಹಿಸಲು ಜವಳಿ ಉದ್ಯಮದಡಿ ಸರ್ಕಾರದಿಂದ ಶೇ 90ರಷ್ಟು ಸಹಾಯಧನ ನೀಡುತ್ತಿದೆ. ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ,‘ ನೇಕಾರರ ಉತ್ಪನ್ನಗಳಿಗೆ ಸರಿಯಾದ ಪ್ರತಿಫಲ ದೊರಕಬೇಕು’ ಎಂದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ವಿ.ಎಸ್.ಜ್ಯೋತಿಗಣೇಶ್, ‘ವಿದ್ಯಾರ್ಥಿಗಳು ಶೈಕ್ಷಣಿಕ ಸಾಲಕ್ಕಾಗಿ ಆನ್ಲೈನ್ ಮೂಲಕ ವಿದ್ಯಾಲಕ್ಷ್ಮಿ ಪೋರ್ಟಲ್ಗೆ ಅರ್ಜಿ ಸಲ್ಲಿಸಿ ಬ್ಯಾಂಕ್ನಲ್ಲಿ ಸಾಲ ಪಡೆಯಬಹುದು’ ಎಂದರು.
ವಿವಿಧ ಯೋಜನೆಯಡಿ ಬ್ಯಾಂಕುಗಳಿಂದ ಲಭಿಸುವ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಮೂವರು ನೇಕಾರರನ್ನು ಸನ್ಮಾನಿಸಲಾಯಿತು. ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಎಸ್.ವಿರೂಪಾಕ್ಷಪ್ಪ, ಆರ್ಯನ್ ಹೈಸ್ಕೂಲ್ ಅಸೋಸಿಯೋಷನ್ ಉಪಾಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಆರ್ಯನ್ ಹೈಸ್ಕೂಲ್ ಅಸೋಸಿಯೇಷನ್ ಕಾರ್ಯದರ್ಶಿ ಆರ್.ಎನ್.ಸತ್ಯನಾರಾಯಣ, ಬಾಪೂಜಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಂ.ಬಸವಯ್ಯ, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.