ಶಿರಾ: ರಾಷ್ಟ್ರೀಯ ಹೆದ್ದಾರಿ 48ರ ಶಿರಾ ಬೈಪಾಸ್ ರಸ್ತೆ ಪಕ್ಕದಲ್ಲಿರುವ ಅರಸು ಹೋಟೆಲ್ನಲ್ಲಿ ಉಪಹಾರ ತಿನ್ನುವಾಗ ಹಲ್ಲಿಯೊಂದು ಸಿಕ್ಕಿದ್ದು, ಗ್ರಾಹಕರು ಆತಂಕಗೊಂಡರು.
ಮಹಾರಾಷ್ಟ್ರದಿಂದ ಬೆಂಗಳೂರಿಗೆ ರವಿಶಂಕರ್ ಗುರೂಜಿ ಅವರ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಸುಮಾರು 60ಕ್ಕೂ ಹೆಚ್ಚು ಮಂದಿ ಅರಸು ಹೋಟೆಲ್ನಲ್ಲಿ ತಿಂಡಿ ತಿನ್ನಲು ಬಂದಿದ್ದರು. ಮಕ್ಕಳು, ಯುವಕರು ಸೇರಿದಂತೆ ಕೆಲವರು ತಿಂಡಿ ತಿಂದು ಬಸ್ಸಿನ ಕಡೆ ಹೊರಡುತ್ತಿದ್ದರು. ಮತ್ತೆ ಕೆಲವರು ಉಪಹಾರ ಸೇವಿಸುತ್ತಿದ್ದರು. ಅಷ್ಟರಲ್ಲಿ ರಮೇಶ್ ಎಂಬುವರಿಗೆ ತಾವು ತಿನ್ನುತ್ತಿದ್ದ ಉಪಹಾರದಲ್ಲಿ ಹಲ್ಲಿಯೊಂದು ಕಂಡಿದೆ.
ತಕ್ಷಣವೇ ಇದನ್ನು ಕಂಡು ಹೌಹಾರಿದ ರಮೇಶ್ ಅವರು ಉಪಹಾರ ಸೇವಿಸದಂತೆ ಕೂಗಿದರು. ಬಳಿಕ ಹೋಟೆಲ್ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲರೂ ಸ್ವಯಂ ವಾಂತಿ ಮಾಡಿಕೊಳ್ಳಲು ಮುಂದಾದರು. ನಂತರ ಹೋಟೆಲ್ ಮಾಲೀಕನ ಜೊತೆ ಚರ್ಚೆ ನಡೆಸಿ ಅಲ್ಲಿಂದ ಬೆಂಗಳೂರು ಕಡೆಗೆ ಹೊರಟು ಹೋದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಶಿರಾ ನಗರ ಠಾಣೆಯ ಸಿಪಿಐ ರಂಗಸ್ವಾಮಿ ಪರಿಶೀಲನೆ ನಡೆಸಿದರು. ಈ ವೇಳೆಗಾಗಲೇ ತಿಂಡಿ ತಿಂದವರು ಅಲ್ಲಿಂದ ಹೊರಟು ಹೋಗಿದ್ದ ಕಾರಣ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಸಾಧ್ಯವಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.