ಚಿಕ್ಕನಾಯಕನಹಳ್ಳಿ: ದೇವಾಂಗ ಜನಾಂಗದ ಉನ್ನತಿಗಾಗಿ ದೇವಾಂಗ ಅಭಿವೃದ್ದಿ ನಿಗಮ ಸ್ಥಾಪಿಸಬೇಕು ಎಂದು ದೇವಾಂಗ ಅಭಿವೃದ್ದಿ ನಿಗಮ ಹೋರಾಟ ಸಮಿತಿ ರಾಜ್ಯ ಸಂಚಾಲಕ ಡಾ.ಜಿ.ರಮೇಶ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣದ ಬನಶಂಕರಿ ಪ್ರಾರ್ಥನ ಮಂದಿರದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹಲವಾರು ವರ್ಷಗಳಿಂದ ಸಾಮಾಜಿಕ ಹಾಗೂ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವ ನಾವುಗಳು 30 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. 8ರಿಂದ 10 ಶಾಸಕರು ನಮ್ಮನ್ನು ಪ್ರತಿನಿಧಿಸಬೇಕಾಗಿದೆ. ದೇವಾಂಗಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಡ ಹೇರಿದರೂ ಪ್ರಯೋಜನವಾಗಿಲ್ಲ. ಇದೇ ನಿರ್ಲಕ್ಷ್ಯತನ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ದೇವಾಂಗ ಅಭಿವೃದ್ದಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಫೆ.10ರಂದು ಹೊಸದುರ್ಗದ ಬನಶಂಕರಿ ಸಮುದಾಯ ಭವನದಲ್ಲಿ ದಯಾನಂದಪುರಿ ಸ್ವಾಮಿಗಳ ನೇತೃತ್ವದಲ್ಲಿ ಜಾಗೃತಿ ಸಭೆ ನಡೆಸಿ ಮೆರವಣಿಗೆಯ ಮೂಲಕ ತೆರಳಿ ಶಾಸಕರು, ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ದೇವಾಂಗ ಸಮುದಾಯ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಹೊಸದುರ್ಗ ದೇವಾಂಗ ಸಂಘದ ಅಧ್ಯಕ್ಷ ಗೋವಿಂದರಾಜು, ಗುರುಪ್ರಸಾದ್, ಪ್ರವೀಣ್, ಕಿರಣ್, ಸುನೀಲ್, ಪುರಸಭಾ ಸದಸ್ಯೆ ಲಕ್ಷ್ಮೀ, ಮುಖಂಡ ಕೆಇಬಿ ಧನರಾಜ್, ಪಾಂಡುರಂಗ, ಜವಾಜಿ ರಂಗನಾಥ್, ಕೋಡಿ ಲೋಕೇಶ್, ಪದ್ಮ, ವರದರಾಜು, ತ್ಯಾಮಗೊಂಡ್ಲು ರಂಗನಾಥ್, ಗಿರೀಶ್, ಜಗದೀಶ್, ಕೃಷ್ಣಯ್ಯ, ಪುರುಷೋತ್ತಮ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.