ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಶೈಕ್ಷಣಿಕ ಜಾಗೃತಿ ಪ್ರಚಾರ ಆಂದೋಲನ ವಾಹನಕ್ಕೆ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಠದಲ್ಲಿ ಶುಕ್ರವಾರ ಚಾಲನೆ ನೀಡಿದರು.
ನಗರದ ಪ್ರಮುಖ ರಸ್ತೆಗಳು, ಜನನಿಬಿಡ ಪ್ರದೇಶಗಳು, ಬಡಾವಣೆಗಳಲ್ಲಿ ಸಂಚರಿಸಿ ಉನ್ನತ ಶಿಕ್ಷಣ ಪಡೆಯುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಿದೆ. ಎಲ್ಇಡಿ ಪರದೆಯ ಮೂಲಕ ವಿ.ವಿ ಶೈಕ್ಷಣಿಕ ಕಾರ್ಯಕ್ರಮಗಳು, ಪ್ರವೇಶ ಪಡೆಯುವುದು, ಶುಲ್ಕ ವಿನಾಯಿತಿ ಸೇರಿದಂತೆ ಪ್ರಮುಖ ವಿಚಾರಗಳನ್ನು ತಿಳಿಸಿಕೊಡಲಾಗುತ್ತದೆ.
ವಿವಿಧ ಕಾರಣಗಳಿಂದ ಉನ್ನತ ಶಿಕ್ಷಣದಿಂದ ವಂಚಿತರಾದವರಿಗೆ ವಿದ್ಯಾಭ್ಯಾಸ ಮುಂದುವರಿಸಲು, ಉದ್ಯೋಗಸ್ಥರು, ಅಂಗವಿಕಲರು, ಮಹಿಳೆಯರು, ಜ್ಞಾನಾರ್ಜನೆ ಬಯಸುವವರು ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು ಉನ್ನತ ಶಿಕ್ಷಣ ಪಡೆದುಕೊಳ್ಳಬಹುದಾಗಿದೆ ಎಂದು ಸ್ವಾಮೀಜಿ ಸಲಹೆ ಮಾಡಿದರು.
ಕೋವಿಡ್ನಿಂದ ತಂದೆ, ತಾಯಿ ಕಳೆದುಕೊಂಡ ಮಕ್ಕಳು, ಲಿಂಗತ್ವ ಅಲ್ಪಸಂಖ್ಯಾತರು, ದೃಷ್ಟಿ ಹೀನರಿಗೆ ಉಚಿತ ಪ್ರವೇಶ ನೀಡಲಾಗುತ್ತಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು, ಸೇನೆ, ಮಾಜಿ ಸೈನಿಕರು, ಆಟೊ, ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳು ಹಾಗೂ ಕೆಎಸ್ಆರ್ಟಿಸಿ ನೌಕರರಿಗೆ ಬೋಧನ ಶುಲ್ಕದಲ್ಲಿ ರಿಯಾಯಿತಿ ನೀಡಿ ಸಮಾಜದ ಸಾಕಷ್ಟು ಜನರು ಉನ್ನತ ಶಿಕ್ಷಣ ಪಡೆಯುವಂತೆ ಮಾಡಿದೆ ಎಂದು ತಿಳಿಸಿದರು.
ಮುಕ್ತ ವಿ.ವಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಆರ್.ಲೋಕೇಶ್, ‘ಮುಕ್ತ ವಿ.ವಿಯಲ್ಲಿ ಪಡೆಯುವ ಪದವಿಗಳು ಯುಜಿಸಿ ನಿಯಮಾವಳಿ ಪ್ರಕಾರ ಭೌತಿಕ ಶಿಕ್ಷಣ ಪದವಿಗೆ ಸರಿಸಮನಾದ ಅರ್ಹತೆ ಹೊಂದಿವೆ. ವಿ.ವಿ ನೀಡುತ್ತಿರುವ ಶಿಕ್ಷಣ ಕ್ರಮಗಳಿಗೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಮಾನ್ಯತೆ ನೀಡಿದೆ’ ಎಂದು ವಿವರಿಸಿದರು.
ಪ್ರಚಾರ ಆಂದೋಲನದ ಸಂಯೋಜಕ ಸಿದ್ದೇಗೌಡ, ತುಮಕೂರು ವಿ.ವಿ ಪ್ರಾಧ್ಯಾಪಕ ಪರಮಶಿವಯ್ಯ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.